ಕನಕಪುರ: ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಾಗಿ ರೈತರು ಮೈಕ್ರೋ ಫೈನಾನ್ಸ್ ಮತ್ತು ಖಾಸಗಿ ಲೇವಾದೇವಿದಾರರಿಂದ ಹೆಚ್ಚಿನ ಬಡ್ಡಿ ಸಾಲ ಮಾಡುವುದನ್ನು ತಪ್ಪಿಸಿ ಕಡಿಮೆ ಬಡ್ಡಿದರದಲ್ಲಿ ಒಡವೆ ಮೇಲೆ ಗರಿಷ್ಠ ಸಾಲ ನೀಡುವ 'ಗೋಲ್ಡ್ಪ್ಲಾಜ್' (ಚಿನ್ನಸಾಲದ ಸಂಕಿರ್ಣ) ಯೋಜನೆ ಜಾರಿಗೆ ತಂದಿರುವುದಾಗಿ ಕೆನರಾ ಬ್ಯಾಂಕ್ ಮುಖ್ಯ ಕಚೇರಿ ಮಹಾಪ್ರಬಂಧಕ ಡಿ.ವಿಜಯಕುಮಾರ್ ತಿಳಿಸಿದರು.
ನಗರದ ಕೆನರಾ ಬ್ಯಾಂಕ್ ಶಾಖೆಯಲ್ಲಿ ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ನೂತನವಾಗಿ ಪ್ರಾರಂಭಗೊಂಡಿರುವ ಗೋಲ್ಡ್ ಪ್ಲಾಜ್ ಯೋಜನೆಯನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಈ ಯೋಜನೆ ದೇಶದಲ್ಲೇ ಪ್ರಪ್ರಥಮವಾಗಿ ಕೆನರಾ ಬ್ಯಾಂಕ್ನಲ್ಲಿ ಆರಂಭಿಸಲಾಗಿದೆ. ವಿಶೇಷ ಸೌಲಭ್ಯವಾಗಿ ಕಡಿಮೆ ಬಡ್ಡಿದರದಲ್ಲಿ ಕೃಷಿ, ಕೃಷಿಯೇತರ ಹಾಗೂ ಇತರೆ ಉದ್ದೇಶಕ್ಕಾಗಿ ತ್ವರಿತ ಗತಿಯಲ್ಲಿ ಚಿನ್ನದ ಮೇಲೆ ಸಾಲ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಪಹಣಿ ಮೇಲೆ ರೈತರಿಗೆ ₹2ಲಕ್ಷ ಗರಿಷ್ಠ ಮಿತಿ ಮಾಡಲಾಗಿತ್ತು. ಪ್ರಸ್ತುತ ಯೋಜನೆಯಿಂದ ₹5 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಒಂದು ವರ್ಷ ಅವಧಿಯಲ್ಲಿ ಸಕಾಲಕ್ಕೆ ಮರುಪಾವತಿ ಮಾಡುವವರಿಗೆ ಶೇಕಡ ಶೇ5ರಷ್ಟು ಸಹಾಯ ಧನ ನೀಡಲಾಗುವುದು ಎಂದು ತಿಳಿಸಿದರು.
ಕೃಷಿಯೇತರರಿಗೆ ಒಡವೆ ಸಾಲ ಗರಿಷ್ಠ 10ಲಕ್ಷಕ್ಕೆ ಏರಿಕೆ ಮಾಡಿದ್ದು ವಾರ್ಷಿಕವಾಗಿ ಶೇಕಡ ಶೇ10.50ರಷ್ಟು ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು. ಇದರಲ್ಲಿ ಪ್ರತಿ ತಿಂಗಳು ಬಡ್ಡಿ ಪಾವತಿ ಮಾಡಬೇಕು ಎಂದು ತಿಳಿಸಿದರು.
ಕೆನರಾ ಬ್ಯಾಂಕ್ ವೃತ್ತ ಕಾರ್ಯಾಲಯದ ಮಹಾ ಪ್ರಬಂಧಕ ಲಕ್ಷ್ಮೀನಾರಾಯಣ, ಸಹಾಯಕ ಮಹಾಪ್ರಬಂಧಕ ಕೆ.ವಿ.ಕಾಮತ್, ಬಿಎಂಐಸಿ ಮಾಜಿ ಅಧ್ಯಕ್ಷ ಎಚ್.ಕೆ.ಶ್ರೀಕಂಠು ಇದ್ದರು.
ಕನಕಪುರ ಶಾಖೆ ಮುಖ್ಯ ಪ್ರಬಂಧಕ ಎನ್.ಎಸ್.ಅಂಜನ್ಕುಮಾರ್ ಕಾರ್ಯಕ್ರಮ ನಿರೂಪಿಸಿದರು.