ಕನಕಪುರ: ತೋಟಳ್ಳಿಯಲ್ಲಿ ಕೊರೊನಾ ಸೋಂಕು ಹರಡಿರುವ ಹಿನ್ನೆಲೆಯಲ್ಲಿ ಅಚ್ಚಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಯಂಪ್ರೇರಿತ ಲಾಕ್ಡೌನ್ ಘೋಷಿಸಲಾಗಿದೆ. ಬೆಳಿಗ್ಗೆ 7ರಿಂದ 10ರವರೆಗೆ ಮಾತ್ರ ಅಂಗಡಿಗಳನ್ನು ತೆರದು ವ್ಯಾಪಾರ ನಡೆಸಲು ಅವಕಾಶ ಮಾಡಿಕೊಡಲಾಗಿದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೃಷ್ಣ ತಿಳಿಸಿದರು.
ತುರ್ತುಸಭೆ ನಡೆಸಿದ ಗ್ರಾಮ ಪಂಚಾಯಿತಿ ಸದಸ್ಯರು, ಮುಖಂಡರು ಎಲ್ಲರ ಅಭಿಪ್ರಾಯ ಪಡೆದು ಲಾಕ್ಡೌನ್ ಘೋಷಣೆ ನಿರ್ಧಾರ ಕೈಗೊಂಡರು. ಸೋಂಕು ತಗುಲಿರುವ ವ್ಯಕ್ತಿಯನ್ನು ಈಗಾಗಲೇ ಕ್ವಾರಂಟೈನ್ಗೆ ಒಳಪಡಿಸಲಾಗಿದೆ. ಜುಲೈ 1ರವರೆಗೂ ಲಾಕ್ಡೌನ್ ಜಾರಿಯಲ್ಲಿ ಇರಲಿದೆ ಎಂದರು.
ಮುಖಂಡ ಕೆ.ಟಿ.ಸುರೇಶ್ ಮತ್ತು ಗ್ರಾಮ ಪಂಚಾಯಿತಿ ಸದಸ್ಯರಾದ ಕುಮಾರಸ್ವಾಮಿ, ಕೆಂಗೇಗೌಡ ಮಾತನಾಡಿ, ಚೂಡಾಮಣಿ ಬಟ್ಟೆ ಅಂಗಡಿ ಮತ್ತು ನವೋದಯ ಆಸ್ಪತ್ರೆಗೆ ಹೋಗಿ ಬಂದಿರುವವರು ಸೋಂಕಿನ ಪರೀಕ್ಷೆ ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಕೃಷಿ ಮತ್ತು ಹೈನುಗಾರಿಕೆಯಲ್ಲಿ ತೊಡಗಿರುವ ರೈತರು ಎಚ್ಚರಿಕೆ ವಹಿಸಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳಬೇಕು ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೌರಮ್ಮ, ಸದಸ್ಯರಾದ ಜೈರಾಮು, ನಾಗಮ್ಮ, ಮುಖಂಡರಾದ ಕೃಷ್ಣೇಗೌಡ, ಬಲರಾಮೇಗೌಡ, ಚಿಕ್ಕಸ್ವಾಮಿ, ಲಿಂಗರಾಜು ಮತ್ತಿತರರು ಇದ್ದರು.