ಮಾಗಡಿ:ಲಾಕ್ಡೌನ್ ಉಲ್ಲಂಘಿಸಿದರೆ, ಎಚ್ಚರಿಕೆಗಳನ್ನು ಪಾಲಿಸದಿದ್ದರೆ ಕೊರೊನಾ ಸೋಂಕಿಗೆ ಒಳಗಾಗ ಬೇಕಾಗುತ್ತದೆ. ಈ ಮೂಲಕ ವೈದ್ಯರಿಗೂ ಒತ್ತಡ ಹೆಚ್ಚಿಸಿದಂತಾಗುತ್ತದೆ ಎಂದು ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ರಾಜೇಶ್ ತಿಳಿಸಿದರು.
ಡಿ.ಕೆ.ಸುರೇಶ್ ಅಭಿಮಾನಿಗಳ ಬಳಗ ಮತ್ತು ವಿದ್ಯಾರ್ಥಿ ಕಾಂಗ್ರೆಸ್ ವತಿಯಿಂದ ಶುಕ್ರವಾರ ಸರ್ಕಾರಿ ಆಸ್ಪತ್ರೆಯ ವೈದ್ಯರು, ದಾದಿಯರು ಮತ್ತು ಸಿಬ್ಬಂದಿಗೆ ಏರ್ಪಡಿಸಿದ್ದ ಭೋಜನ ವ್ಯವಸ್ಥೆ ಸಂದರ್ಭ ಮಾತನಾಡಿದರು.
‘ಕೊರೊನಾ ಹರಡದಂತೆ ತಡೆಗಟ್ಟಲು ಸರ್ಕಾರದ ಆದೇಶದಂತೆ ಎಲ್ಲರೂ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದೇವೆ. ಸಾರ್ವಜನಿಕರು ಲಾಕ್ಡೌನ್ ಉಲ್ಲಂಘಿಸಿ, ಮನೆಯಿಂದ ಹೊರಗೆ ಬಂದು ಗುಂಪು ಗುಂಪಾಗಿ ಸೇರುವುದು, ಅಲೆಯುವುದು ಸರಿಯಲ್ಲ. ಕೊರೊನಾದ ಬಗ್ಗೆ ಎಚ್ಚರಿಕೆಯಿಂದ ಇದ್ದರೆ, ನಾವು ಹೋರಾಟದಲ್ಲಿ ಅರ್ಧ ಗೆದ್ದಂತೆ’ ಎಂದು ಹೇಳಿದರು.
ವೈಯಕ್ತಿಕ ಸ್ವಚ್ಛತೆಯೆಡೆಗೆ ಗಮನೀಕರಿಸಬೇಕು.ಸಾಬೂನು ಬಳಸಿ, ಪದೆ ಪದೇ ಕೈತೊಳೆಯುವುದು. ಮನೆಯಲ್ಲಿಯೇ ಉಳಿಯುವುದು ಬಹುಮುಖ್ಯ. ಆಸ್ಪತ್ರೆಯಲ್ಲಿಯೇ ಉಳಿದು, ಮನೆಗಳತ್ತ ತೆರೆಳದೇ ನೂರಾರು ಮಂದಿ ಸಿಬ್ಬಂದಿ ಹಗಲು– ರಾತ್ರಿ ಶ್ರಮಿಸುತ್ತಿದ್ದಾರೆ. ಇವರ ಸೇವಾಬದ್ಧತೆಗೆ ಸಾರ್ವಜನಿಕರ ಸಹಕಾರ ಮುಖ್ಯ.ಹೊರಗಿನಿಂದ ಬಂದವರ ಬಗ್ಗೆ ಕೂಡಲೆ ಆಸ್ಪತ್ರೆಗೆ ಅಥವಾ ಪೊಲೀಸು ಠಾಣೆಗೆ ಮಾಹಿತಿ ನೀಡಿ, ಕ್ವಾರಂಟೈನ್ಗೆ ಒಳಪಡಿಸಲು ಸಹಕರಿಸಬೇಕು ಎಂದರು.
‘ಕೊರೊನಾ ತಡೆಗಟ್ಟಲು ಶ್ರಮಿಸುತ್ತಿರುವ ವೈದ್ಯಕೀಯ ಸಿಬ್ಬಂದಿಗಳಿಗೆ ಭೋಜನ ವ್ಯವಸ್ಥೆ ಮಾಡಿರುವ ಕಾರ್ಯ ಶ್ಲಾಘನೀಯ ಎಂದರು.
ಡಿ.ಕೆ.ಸುರೇಶ್ ಅಭಿಮಾನಿಗಳ ಬಳಗದ ಅಧ್ಯಕ್ಷ ಮತ್ತಿಕೆರೆ ನಾಗೇಶ್ ಮಾತನಾಡಿ, ಹೋಟೆಲ್ ಮುಚ್ಚಿರುವುದರಿಂದ ವೈದ್ಯಕೀಯ ಸಿಬ್ಬಂದಿಗಳಿಗೆ ಉಪಾಹಾರಕ್ಕೆ ತೊಂದರೆಯಾಗಿರುವುದನ್ನು ಮನಗಂಡು, ಊಟದ ವ್ಯವಸ್ಥೆ ಮಾಡಲಾಗಿದೆ. ಇಂತಹ ಸಮಯದಲ್ಲಿ ವೈದ್ಯಲೋಕಕ್ಕೆ ಬೆಂಬಲವಾಗಿ ನಿಲ್ಲಬೇಕಿರುವುದು ಎಲ್ಲ ನಾಗರಿಕರ ಕರ್ತವ್ಯ’ ಎಂದು ಹೇಳಿದರು.
ವಿದ್ಯಾರ್ಥಿ ಕಾಂಗ್ರೆಸ್ ಘಟಕದ ಅಧ್ಯಕ್ಷ ವಸಂತಕುಮಾರ್, ಕಾರ್ಯದರ್ಶಿ ಯೋಗೇಶ್, ವಿದ್ಯಾರ್ಥಿ ಮುಖಂಡರಾದ ನಾಗರಾಜು, ನವೀನ್, ಮನು, ಅರುಣ್ ಇದ್ದರು.