ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಶಿವರಾತ್ರಿ ಸಂಭ್ರಮ; ಎಲ್ಲೆಡೆ ಶಿವನಾಮ ಸ್ಮರಣೆ

Last Updated 11 ಮಾರ್ಚ್ 2021, 14:05 IST
ಅಕ್ಷರ ಗಾತ್ರ

ರಾಮನಗರ: ಮಹಾ ಶಿವರಾತ್ರಿ ಅಂಗವಾಗಿ ಗುರುವಾರ ಜಿಲ್ಲೆಯಾದ್ಯಂತ ದೇಗುಲಗಳಲ್ಲಿ ವಿಶೇಷ ಪೂಜೆ ನೆರವೇರಿತು. ಶಿವನ ಭಕ್ತರು ಇಡೀ ದಿನ ನೆಚ್ಚಿನ ದೈವದ ಆರಾಧನೆಯಲ್ಲಿ ತೊಡಗಿದ್ದರು.

ಮುಂಜಾನೆಯಿಂದಲೇ ಇಲ್ಲಿನ ವಿವಿಧ ಶಿವ ದೇವಾಲಯಗಳಲ್ಲಿ ಭಕ್ತರು ದೇವರ ದರ್ಶನಕ್ಕೆ ಬಂದಿದ್ದರು. ದೇವಾಲಯಗಳಲ್ಲಿ ಘಂಟೆ ಜಾಗಟೆಗಳ ಸದ್ದು ಮೊಳಗಿದವು. ಭಕ್ತರು ‘ಹರಹರ ಮಹಾದೇವ ಶಂಭೋ ಶಿವಶಂಕರ’ ಎಂದು ಘೋಷಣೆ ಕೂಗಿದರು.

ಈಶ್ವರನ ದೇವಾಲಯಗಳಲ್ಲಿ ರುದ್ರಾಭಿಷೇಕ, ಕ್ಷೀರಾಭಿಷೇಕ, ರುದ್ರಕಲಶ ಸ್ಥಾಪನೆ, ರುದ್ರಹೋಮ, ಬಿಲ್ವಾರ್ಚನೆ, ಮಹಾಮಂಗಳಾರತಿ ನಂತರ ಭಕ್ತರಿಗೆ ತೀರ್ಥಪ್ರಸಾದ ವಿತರಿಸಲಾಯಿತು. ಮನೆಮನೆಗಳಲ್ಲಿ ಬಿಲ್ವಪತ್ರೆ ಹಾಗೂ ಹೂ ಗಳಿಂದ ಈಶ್ವರನನ್ನು ಪೂಜಿಸಲಾಯಿತು.
ಶಿವರಾತ್ರಿಯ ವಿಶೇಷವೆಂದರೆ ಇಡೀ ದಿನ ಉಪವಾಸ, ನಂತರ ಇಡೀ ರಾತ್ರಿ ನಿದ್ರೆ ಮಾಡದೆ ಜಾಗರಣೆ ಇರುವ ಕಾರಣ ಶಿವನ ದೇವಾಲಯಗಳಲ್ಲಿ ವಿಶೇಷ ಪೂಜೆ, ಹೋಮ ಹವನಗಳು ನಡೆದವು. ಮಹಾಶಿವರಾತ್ರಿಯ ಅಂಗವಾಗಿ ಹಲವು ದೇವಾಲಯಗಳು ಜಾಗರಣೆ ಉದ್ದೇಶಕ್ಕಾಗಿ ಬೆಳಗಿನ ಜಾವದವರೆಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದವು.

ಅರ್ಕಾವತಿ ನದಿ ದಂಡೆಯ ಮೇಲೆ ನೆಲೆಸಿರುವ ಅರ್ಕೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಬೆಳಿಗ್ಗೆಯಿಂದಲೇ ಭಕ್ತರು ಸರದಿ ಸಾಲಿನಲ್ಲಿ ನಿಂತು ಈಶ್ವರನ ದರ್ಶನ ಪಡೆದರು. ಬಸವೇಶ್ವರಸ್ವಾಮಿ, ಅರ್ಚಕರಹಳ್ಳಿಯ ಮಲ್ಲೇಶ್ವರ, ಮಹದೇಶ್ವರ ಮೊದಲಾದ ದೇವಾಲಯಗಳಲ್ಲಿ ಬೆಳಿಗ್ಗಿನಿಂದಲೇ ಭಕ್ತರ ಸಾಲು ನೆರೆದಿತ್ತು.

ಇಲ್ಲಿನ ಪಂಚಮುಖಿ ಆಂಜನೇಯಸ್ವಾಮಿ ದೇವಾಲಯ, ಬಲಮುರಿ ಗಣಪತಿ ದೇವಸ್ಥಾನ, ಸಂಕಷ್ಟಹರ ಗಣಪತಿ ದೇವಸ್ಥಾನ, ಶ್ರೀರಾಮ ದೇವಾಲಯ, ರಾಘವೇಂದ್ರ ಸ್ವಾಮಿ ದೇವಾಲಯ, ಚಾಮುಂಡೇಶ್ವರಿ, ಬನ್ನಿ ಮಹಾಂಕಾಳಿ, ಆದಿಶಕ್ತಿ, ಬಿಸಿಲು ಮಾರಮ್ಮ ದೇವಾಲಯ, ವೆಂಕಟೇಶ್ವರಸ್ವಾಮಿ ದೇವಸ್ಥಾನ, ಕನ್ನಿಕಾಪರಮೇಶ್ವರಿ, ಕಾಳಿಕಾಂಬ ದೇವಾಲಯ ಸೇರಿದಂತೆ ನಗರ ಹಾಗೂ ಗ್ರಾಮಾಂತರ ಪ್ರದೇಶದ ದೇವಾಲಯಗಳಲ್ಲಿ ಮಹಾಶಿವರಾತ್ರಿಯ ಅಂಗವಾಗಿ ವಿಶೇಷ ಪೂಜೆ, ಅಲಂಕಾರವನ್ನು ಏರ್ಪಡಿಸಲಾಗಿತ್ತು.

ಬೆಟ್ಟದಲ್ಲಿ ಭಕ್ತರ ದಂಡು: ಶಿವರಾತ್ರಿ ಅಂಗವಾಗಿ ರೇವಣ ಸಿದ್ಧೇಶ್ವರ ಬೆಟ್ಟದ ಮೇಲಿರುವ ದೇಗುಲದಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ದೇವರ ಮೂರ್ತಿಯನ್ನು ಹೂವಿನಿಂದ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ಭಕ್ತರು ಶಿವನಾಮ ಸ್ಮರಣೆ ಮಾಡುತ್ತಾ ಮೆಟ್ಟಿಲುಗಳನ್ನು ಏರಿ, ಬಂಡೆಯೊಳಗಿನ ದೇಗುಲದಲ್ಲಿನ ದೇವರ ಮೂರ್ತಿಗೆ ಪೂಜೆ–ಪ್ರಾರ್ಥನೆ ಸಲ್ಲಿಸಿದರು. ಮುಂಜಾನೆಯಿಂದಲೇ ಜನರ ಉದ್ದನೆಯ ಸಾಲು ನೆರೆದಿತ್ತು.

ಬಾಕ್ಸ್‌
ದೇವರ ಮೂರ್ತಿಗಳ ಮೆರವಣಿಗೆ
ಪಾಲಬೋವಿದೊಡ್ಡಿ ಗ್ರಾಮದಲ್ಲಿ ಶಿವರಾತ್ರಿ ಹಾಗೂ ಮಲೆ ಮಹದೇಶ್ವರ ಜಾತ್ರೆ ಅಂಗವಾಗಿ ದೇವರ ಮೂರ್ತಿಗಳ ಮೆರವಣಿಗೆ ನಡೆಯಿತು.
ಗ್ರಾಮದ ದೇಗುಲದಲ್ಲಿನ ಮಹದೇಶ್ವರ, ಶನಿ ಮಹಾತ್ಮ, ಛಾಯಾದೇವಿ ಹಾಗೂ ಬಸವಣ್ಣನ ಮೂರ್ತಿಗಳನ್ನು ಜನರು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು. ಬಳಿಕ ಭಕ್ತರಿಗಾಗಿ ಅನ್ನ ಸಂತರ್ಪಣೆ ನಡೆಯಿತು. ನೂರಾರು ಮಂದಿ ಪಾಲ್ಗೊಂಡರು. ದೇವಸ್ಥಾನದಲ್ಲಿ ಬೆಳಗ್ಗೆಯಿಂದ ವಿವಿಧ ಪೂಜಾ ಕಾರ್ಯಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT