ಚನ್ನಪಟ್ಟಣ: ಹಿರಿಯ ಜೀವಗಳನ್ನು ಜೋಪಾನ ಮಾಡಬೇಕಾಗಿರುವುದು ಎಲ್ಲರ ಕರ್ತವ್ಯ ಎಂದು ಇನ್ನರ್ವ್ಹೀಲ್ ಕ್ಲಬ್ ಆಫ್ ಮದ್ದೂರ್ ಅಧ್ಯಕ್ಷೆ ರೇಖಾ ರಾಜು ಹೇಳಿದರು.
ತಾಲ್ಲೂಕಿನ ದೇವರಹಳ್ಳಿ ಗ್ರಾಮದ ಶಿರಡಿ ಸಾಯಿಬಾಬಾ ವೃದ್ಧಾಶ್ರಮಕ್ಕೆ ಇನ್ನರ್ವ್ಹೀಲ್ ಕ್ಲಬ್ ಆಶ್ರಯದಲ್ಲಿ ದಿವಾನ್ ಕಾಟ್, ತಟ್ಟೆ ಲೋಟ, ಬ್ಯಾಗುಗಳು ಹಾಗೂ ಶುಚಿತ್ವ ಪರಿಕರಗಳನ್ನು ವಿತರಣೆ ಮಾಡಿ ಮಾತನಾಡಿದರು.
ವೃದ್ಧರು ಎಂಬ ಪದಗಳ ಬದಲು ಅಜ್ಜ, ಅಜ್ಜಿ ಎಂದು ಸಂಭೋದನೆ ಮಾಡುವುದರ ಮುಖಾಂತರ ಅವರನ್ನು ಪ್ರೀತಿ ವಿಶ್ವಾಸದಿಂದ ನೋಡಿಕೊಂಡಾಗ ಮಾತ್ರ ಮಾನವೀಯ ಮೌಲ್ಯಗಳು ಹುಟ್ಟುತ್ತವೆ. ಮುಪ್ಪು ಎಂಬುದು ಪ್ರತಿಯೊಬ್ಬರಿಗೂ ಬರುವ ಹಂತ. ಭೂಮಿಯ ಮೇಲೆ ಬದುಕು ಕಟ್ಟಿಕೊಂಡಿರುವ ಎಲ್ಲ ಜೀವಿಗಳಿಗೂ ಮುಪ್ಪು ಬರುತ್ತದೆ. ಮನುಷ್ಯನನ್ನು ಮುಪ್ಪಿನ ಕಾಲದಲ್ಲಿ ಪ್ರೀತಿ ವಿಶ್ವಾಸದಿಂದ ನೋಡಿಕೊಳ್ಳಬೇಕು ಎಂದರು.
ಕ್ಲಬ್ ತಂಡದ ಸದಸ್ಯರು ಆಶ್ರಮದ ವೃದ್ಧರಿಗೆ ಸಿಹಿ ತಿನಿಸುಗಳನ್ನು ನೀಡಿ, ಅವರ ಜೊತೆ ಕಾಲ ಕಳೆದು ಉಭಯ ಕುಶಲೋಪರಿ ವಿಚಾರಿಸಿದರು.
ಕ್ಲಬ್ ನ ಸದಸ್ಯರಾದ ಪದ್ಮಶ್ರೀ, ಲಲನಾ ಪತಿಗೌಡ, ಕವಿತಾ, ಅಪೂರ್ವ, ಮಂಗಳ ಸಿದ್ದರಾಜು, ಮಂಗಳಗೌರಿ, ವೈಷ್ಣವಿ, ಭುವನ್ ಇದ್ದರು.