ರಾಮನಗರ:‘ಜೆಡಿಎಸ್ ಕಾರ್ಯಕರ್ತರನ್ನು ನಾಯಿಗೆ ಹೋಲಿಸಿದ್ದೀರಲ್ಲ. ನೀವು ಯಾರ ಕುಮ್ಮಕ್ಕಿನಿಂದ ಬಂದ ನಾಯಿಗಳು' ಎಂದು ಜೆಡಿಎಸ್ ಶಾಸಕ ಎ. ಮಂಜುನಾಥ, ಎಸ್.ಆರ್. ಹಿರೇಮಠ ಮತ್ತವರ ಬೆಂಬಲಿಗರನ್ನು ಪ್ರಶ್ನಿಸಿದರು.
‘ಹಿರೇಮಠ ಮತ್ತವರ ಬೆಂಬಲಿಗರು ಬಿಡದಿ ಹೋಬಳಿಯ ಕೇತಗಾನಹಳ್ಳಿಗೆ ಯಾರ ಗಮನಕ್ಕೂ ಬಾರದಂತೆ ಭೇಟಿ ನೀಡಿ, ಅಲ್ಲಿನ ಗ್ರಾಮಸ್ಥರನ್ನು ಗಲಭೆಗೆ ಪ್ರಚೋದಿಸಿದ್ದಾರೆ. ಇದರ ಹಿಂದೆ ಪ್ರಚಾರ ತಂತ್ರ ಅಡಗಿದೆ. ಇವರ ವಿರುದ್ಧ ಬಿಡದಿ ಪೊಲೀಸರಿಗೆ ದೂರು ನೀಡಲಾಗುವುದು’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಕೇತಗಾನಹಳ್ಳಿಯಲ್ಲಿ ಕುಮಾರಸ್ವಾಮಿ ಅವರ 46 ಎಕರೆ, 28 ಗುಂಟೆ ಜಮೀನು ಇದೆ. ಸಾಕಷ್ಟು ಬಾರಿ ತನಿಖೆ ನಡೆದಿದ್ದು, ಯಾವುದೇ ಸರ್ಕಾರಿ ಭೂಮಿ ಒತ್ತುವರಿ ಆಗಿಲ್ಲ. ಒತ್ತುವರಿ ಸಾಬೀತಾದರೆ ಕುಮಾರಸ್ವಾಮಿ ತಾವೇ ಜಮೀನು ಬಿಟ್ಟುಕೊಡುತ್ತಾರೆ’ಎಂದರು.