ಉಯ್ಯಂಬಳ್ಳಿ (ಕನಕಪುರ): ಇಲ್ಲಿನ ಉಯ್ಯಂಬಳ್ಳಿ ಹೋಬಳಿ ಮರೀಗೌಡನದೊಡ್ಡಿ ಗ್ರಾಮದ ಸಮೀಪದಲ್ಲಿ ಏಳು ತಲೆಯ ಸರ್ಪವೊಂದು ಪೊರೆ ಕಳಚಿರುವುದು ಕಂಡು ಬಂದಿದೆ.
ಅಪರೂವೆನಿಸುವ ಈ ವಿಚಾರ ತಿಳಿಯುತ್ತಿದ್ದಂತೆ ಜನತೆ ತಂಡೋಪ ತಂಡವಾಗಿ ಪೊರೆ ನೋಡಲು ಬರುತ್ತಿದ್ದಾರೆ.
‘ಹಾವು ಪೊರೆ ಬಿಟ್ಟಿರುವ ಜಾಗದ ಬಳಿ ನೀರಿನ ಕೊಣವಿದ್ದು ಇದೊಂದು ಧಾರ್ಮಿಕ ಕ್ಷೇತ್ರವಾಗಿರುಬಹುದು. ಹಿಂದಿನ ಕಾಲದಲ್ಲಿ ಇದೊಂದು ದೈವಕ್ಷೇತ್ರವಾಗಿದ್ದು ಇಲ್ಲಿ ಪೂಜೆ ಪುರಸ್ಕಾರಗಳು ನಡೆಯುತ್ತಿದ್ದವು’ ಎಂದು ಮರೀಗೌಡನದೊಡ್ಡಿ ಗ್ರಾಮಸ್ಥರು ತಿಳಿಸಿದರು.
‘ಕೆಲ ತಿಂಗಳ ಹಿಂದೆ ಇಲ್ಲಿಯೇ ಏಳು ತಲೆ ಸರ್ಪ ಪೊರೆ ಕಳಚಿತ್ತು. ಆಗ ಉರಗ ತಜ್ಞರು ಬಂದು ಹಾವು ಪೊರೆ ಕಳಚಿರುವುದು ಸತ್ಯ. ಇಲ್ಲಿ ಏಳು ತಲೆಯ ಸರ್ಪ ಇರಬಹುದು ಎಂದು ಅಂದಾಜು ಮಾಡಿದ್ದರು’ ಎಂದರು.
ಆಗ ಪೊರೆಯನ್ನು ಧಾರ್ಮಿಕ ಗುರುಗಳು ಪೂಜೆ ಸಲ್ಲಿಸಿ ಅದನ್ನು ಗಾಜಿನ ಪೆಟ್ಟಿಗೆಯಲ್ಲಿಟ್ಟು ರಕ್ಷಣೆ ಮಾಡಿದ್ದರು. ಅದಕ್ಕೆ ಜನತೆ ನಿತ್ಯ ಪೂಜೆ ಸಲ್ಲಿಸುತ್ತಾ ಬಂದಿದ್ದರು. ಮತ್ತೆ ಅದೇ ರೀತಿ ಏಳು ತಲೆಯ ಸರ್ಪ ಮತ್ತೊಮ್ಮೆಪೊರೆ ಕಳಚಿರುವುದು ಜನರ ನಂಬಿಕೆಯನ್ನು ಇನ್ನಷ್ಟು ಹೆಚ್ಚಿಸಿದೆ.