ಬಿಡದಿ ಪೀಠದಲ್ಲಿ ನೆರೆದ ಸಾವಿರಾರು ಭಕ್ತರನ್ನು ಉದ್ದೇಶಿಸಿ ಅವರು ಮಾತನಾಡಿರುವ ಈ ವಿಡಿಯೊ ವೈರಲ್ ಆಗುತ್ತಿದೆ. ‘ಇಂದು ಎಷ್ಟು ಜನ ಸೂರ್ಯೋದಯ ಆದ ವೇಳೆಯನ್ನು ಗಮನಿಸಿದ್ದೀರಿ ಗೊತ್ತಿಲ್ಲ. ನಾನು ಬೆಳಿಗ್ಗೆ 6.45ರಿಂದ 7ರ ಒಳಗೆ ಧ್ವಜಾರೋಹಣ ಮಾಡಬೇಕಿತ್ತು. ಆದರೆ ಆಶ್ರಮದಲ್ಲಿ ಧ್ವಜಾರೋಹಣ ಮಾಡುವುದು ತಡವಾಯಿತು. ಧ್ವಜಾರೋಹಣ ಮಾಡುವವರೆಗೂ ಬರಬೇಡ ಎಂದು ಸೂರ್ಯನಿಗೆ ಹೇಳಿದ್ದೆ. ಧ್ವಜಾರೋಹಣ ಮುಗಿಸಿದ ಮೇಲೆಯೇ ಆತ ಉದಯಿಸಿದ. ಹೀಗಾಗಿಯೇ ಇಂದು ಬಿಡದಿಯಲ್ಲಿ 40 ನಿಮಿಷ ತಡವಾಗಿ ಸೂರ್ಯೋದಯವಾಗಿದೆ. ಬೇಕಿದ್ದರೆ ಗೂಗಲ್ನಲ್ಲಿ ಇಂದಿನ ಸೂರ್ಯೋದಯದ ಸಮಯ ನೋಡಿ’ ಎನ್ನುತ್ತಾರೆ ನಿತ್ಯಾನಂದ. ಇದಕ್ಕೆ ಭಕ್ತರೂ ತಲೆದೂಗುತ್ತಾರೆ.