ಮಾಗಡಿ: ಭಾರತೀಯ ಜೀವವಿಮಾ ನಿಗಮವನ್ನು (ಎಲ್ಐಸಿ) ಖಾಸಗೀಕರಣ ಮಾಡುವುದಿಲ್ಲ ಎಂದು ಸಂಸ್ಥೆಯ ಡಿವಿಜನಲ್ ಮ್ಯಾನೇಜರ್ ಶ್ಯಾಮಲತಾ ತಿಳಿಸಿದರು.
ಪಟ್ಟಣದ ಎಲ್ಐಸಿ ಶಾಖಾ ಕಚೇರಿಯಲ್ಲಿ ನಡೆದ ಏಜೆಂಟರ ಸಭೆಯಲ್ಲಿ ಅವರು ಮಾತನಾಡಿದರು.
ದೇಶದಲ್ಲಿ 40 ಕೋಟಿ ಜನ ಎಲ್ಐಸಿ ಪಾಲಿಸಿದಾರರಾಗಿದ್ದಾರೆ. 2017–2022ರ ಪಂಚವಾರ್ಷಿಕ ಯೋಜನೆಯಲ್ಲಿ ₹28,01,483 ಕೋಟಿಯನ್ನು ದೇಶದ ಅಭಿವೃದ್ಧಿಯಲ್ಲಿ ತೊಡಗಿಸಿದೆ. ₹2611 ಕೋಟಿಯನ್ನು ಸರ್ಕಾರಕ್ಕೆ ಡಿವಿಡೆಂಡ್ ರೂಪದಲ್ಲಿ ಕೊಟ್ಟಿದ್ದೇವೆ. ಖಾಸಗಿ ವಿಮಾ ಕಂಪನಿಗಳು ಎಲ್ಐಸಿ ಬಗ್ಗೆ ಅಪಪ್ರಚಾರ ಮಾಡುವುದನ್ನು ಪಾಲಿಸಿದಾರರು ಗಮನಿಸಬಾರದು ಎಂದರು.
ಎಲ್ಐಸಿ ಶಾಖಾಧಿಕಾರಿ ನಾಗರಾಜಮೂರ್ತಿ ಮಾತನಾಡಿ, ಸಂಸ್ಥೆಯ ಖಾಸಗೀಕರಣದ ಬಗ್ಗೆ ಗೊಂದಲ ಬೇಡ. ಶೇ 5ರಷ್ಟು ಷೇರುಗಳನ್ನು ಮಾರುಕಟ್ಟೆಯಲ್ಲಿ ತೊಡಗಿಸಲಾಗುತ್ತಿದೆ. 32 ಲಕ್ಷ ಕೋಟಿ ಷೇರುಗಳಿವೆ. ಈ ವಿಚಾರದಲ್ಲಿ ಪಾಲಿಸಿದಾರರು ಗೊಂದಲಕ್ಕೆ ಒಳಗಾಗುವುದು ಬೇಡ ಎಂದು ತಿಳಿಸಿದರು.
ಎಲ್ಐಸಿ ಏಜೆಂಟರಾದ ಎನ್.ಕೇಶವಮೂರ್ತಿ, ಆರ್.ನಾಗೇಶ್, ಎಚ್.ಶಿವಕುಮಾರ್ ಪಾಲಿಸಿದಾರರ ಹಿತರಕ್ಷಣೆಯ ಬಗ್ಗೆ ಮಾತನಾಡಿದರು. ಎಲ್ಐಸಿ ಏಜಂಟರು, ವಿಮಾ ಅಧಿಕಾರಿಗಳು, ಶಾಖಾ ಕಚೇರಿಯ ಸಿಬ್ಬಂದಿ ಮತ್ತು ವಲಯ ಅಧಿಕಾರಿಗಳು ಇದ್ದರು.