ಚನ್ನಪಟ್ಟಣ: ‘ಪ್ರಜಾಪ್ರಭುತ್ವದ ಉಳಿವು ಪ್ರಜೆಗಳ ಕೈಯಲ್ಲಿದೆ. ಮತದಾನವೆಂಬ ಪವಿತ್ರ ಕಾರ್ಯದಲ್ಲಿ ಸರ್ವರೂ ಪಾಲ್ಗೊಳ್ಳುವ ಮೂಲಕ ಸಂವಿಧಾನ ಬದ್ಧ ಹಕ್ಕನ್ನು ಚಲಾಯಿಸಬೇಕು’ ಎಂದು ಚನ್ನಾಂಬಿಕ ಪದವಿ ಕಾಲೇಜು ಪ್ರಾಂಶುಪಾಲ ವಿಜಯ್ ರಾಂಪುರ ತಿಳಿಸಿದರು.
ತಾಲ್ಲೂಕಿನ ಮೋಳೆದೊಡ್ಡಿ ಗ್ರಾಮದಲ್ಲಿ ಜ್ಞಾನಜ್ಯೋತಿ ಸಾಮಾಜಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ `ಮತದಾನ ನಮ್ಮ ಹಕ್ಕು' ಬೀದಿ ನಾಟಕ ಹಾಗೂ ಜಾಗೃತಿ ಗೀತೆಗಳ ಗಾಯನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
‘ಪ್ರಜೆಗಳಿಂದ, ಪ್ರಜೆಗಳಿಗಾಗಿ ಹಾಗೂ ಪ್ರಜೆಗಳಿಗೋಸ್ಕರ ಇರುವುದೇ ಪ್ರಜಾಪ್ರಭುತ್ವ. ದೇಶವನ್ನು ಅಭಿವೃದ್ಧಿಯತ್ತ ಮುನ್ನಡೆಸುವ ಹೊಣೆಗಾರಿಕೆ ಪ್ರತಿಯೊಬ್ಬ ಮತದಾರರ ಮೇಲಿದೆ. ಯಾವುದೇ ಆಸೆ, ಆಮಿಷಗಳಿಗೆ ತುತ್ತಾಗದೆ ಮತದಾನದ ವಿಚಾರದಲ್ಲಿ ವಿವೇಚನೆಯಿಂದ ವರ್ತಿಸಬೇಕಾದುದು ಎಲ್ಲರ ಜವಾಬ್ದಾರಿ’ ಎಂದರು.
ಟ್ರಸ್ಟ್ ಕಾರ್ಯದರ್ಶಿ ಅಪ್ಪಗೆರೆ ಶ್ರೀನಿವಾಸ್ ಮಾತನಾಡಿ, ‘ಸಮಾಜ ಜಾಗೃತವಾರೆ ದೇಶದ ಭವಿಷ್ಯ ಉಜ್ಜಲವಾಗುತ್ತದೆ. ಕ್ರಿಯಾಶೀಲ ಜನಪ್ರತಿನಿಧಿಗಳನ್ನು ಆರಿಸುವ ಮೂಲಕ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು’ ಎಂದರು.
ಅಧ್ಯಕ್ಷತೆ ವಹಿಸಿದ್ದ ಯುವ ಕವಿ ಅಬ್ಬೂರು ಶ್ರೀನಿವಾಸ್ ಮಾತನಾಡಿ, ‘ಯಾವುದೇ ಒತ್ತಡಕ್ಕೆ ಒಳಗಾಗದೆ ತಮ್ಮ ಹಕ್ಕನ್ನು ಚಲಾಯಿಸಿ ಶಾಂತಿಯುತ ಹಾಗೂ ಸೌಹಾರ್ದಯುತವಾಗಿ ಮತದಾನದಲ್ಲಿ ಪಾಲ್ಗೊಳ್ಳುವುದು ಎಲ್ಲರ ಕರ್ತವ್ಯ. ಆ ಮೂಲಕ ಜವಾಬ್ದಾರಿಯುತ ಸರ್ಕಾರ ರಚನೆಗೆ ಮುಂದಾಗಬೇಕು’ ಎಂದರು.
ಜಾನಪದಹಿರಿಯ ಗಾಯಕ ಚೌ.ಪು.ಸ್ವಾಮಿ ರಚಿಸಿದ ಮತದಾನ ಕುರಿತಾದ ಜಾಗೃತಿ ಗೀತೆಗಳನ್ನು ಶಿವಕುಮಾರ್, ಸುಣ್ಣಘಟ್ಟ ಗಂಗಾಧರ್, ಹೊಂಬಾಳಮ್ಮ, ತಿಮ್ಮಮ್ಮ, ಕೆಂಪಮ್ಮ, ಮಾಯಮ್ಮ ಹಾಡಿದರು. ಬೊಮ್ಮದಾಸಪ್ಪ, ಹಾಗೂ ತವಸಯ್ಯ ನಾಟಕದಲ್ಲಿ ಅಭಿನಯಿಸಿದರು.
ಎಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.