ಕನಕಪುರ: ತಾಲ್ಲೂಕಿನ ಅಚ್ಚಲು ಗೇಟ್ ಬಳಿ ಶುಕ್ರವಾರ ಸಂಜೆ ಅಪಘಾತ ನೋಡುತ್ತ ನಿಂತಿದ್ದವರ ಮೇಲೆ ನೀರಿನ ಟ್ಯಾಂಕರ್ ಹರಿದಿದ್ದು, ಘಟನೆಯಲ್ಲಿ ಒಟ್ಟು ಮೂವರು ಮೃತಪಟ್ಟಿದ್ದಾರೆ.
ಬಳೆ ಬಸಪ್ಪನದೊಡ್ಡಿ ನಿವಾಸಿ ಸಂಪಂಗಿ ರಾಮು (40), ಅಚ್ಚಲು ಬಳಿಯ ಇಂದಿರಾನಗರ ನಿವಾಸಿ ಸುರೇಶ್(60) ಮೃತರು. ಇನ್ನೊಬ್ಬರು ಮೃತರ ಗುರುತು ಪತ್ತೆಯಾಗಿಲ್ಲ. ಅಚ್ಚಲು ನಿವಾಸಿ ಎ.ಸಿ. ನಂದೀಶ್ ಎಂಬುವರೂ ಘಟನೆಯಲ್ಲಿ ಗಾಯಗೊಂಡಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಂಪಂಗಿ ರಾಮು ರಸ್ತೆಯಲ್ಲಿ ನಡೆದು ಹೊರಟಿದ್ದ ಸಂದರ್ಭ ಕಾರ್ ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟರು. ಈ ಅಪಘಾತವನ್ನು ನೋಡುತ್ತ ನಿಂತಿದ್ದವರ ಮೇಲೆ ಸದ್ಬವ ಕನ್ಸ್ಟ್ರಕ್ಷನ್ಸ್ ಗೆ ಸೇರಿದ ನೀರಿನ ಟ್ಯಾಂಕರ್ ಹಿಂದಿನಿಂದ ಹರಿಯಿತು. ಇದರಿಂದಾಗಿ ಇನ್ನಿಬ್ಬರು ಸ್ಥಳದಲ್ಲೇ ಮೃತಪಟ್ಟರು ಎಂದು ಪೊಲೀಸರು ತಿಳಿಸಿದರು.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಸಾತನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.