ಚನ್ನಪಟ್ಟಣ: ಪಟ್ಟಣದ ಲಯನ್ಸ್ ಸಂಸ್ಥೆ ಮತ್ತು ಒನ್ ಭೂಮಿ ಫೌಂಡೇಷನ್ ವತಿಯಿಂದ ಶನಿವಾರ ಬೆಳಿಗ್ಗೆ ಸ್ವಚ್ಛ ನಗರ ಸ್ವಚ್ಛ ಪರಿಸರ ಧ್ಯೇಯ ವಾಕ್ಯದೊಂದಿಗೆ ಪಟ್ಟಣದ ರಾಜ ಕೆಂಪೇಗೌಡ ಬಡಾವಣೆಯ ಮನೆ ಮನೆಗೆ ತೆರಳಿ ಹಸಿ ಮತ್ತು ಒಣ ಕಸ ವಿಂಗಡಿಸಿ ವಿಲೇವಾರಿ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.
ಕಸ ವಿಂಗಡಿಸುವುದರ ಜೊತೆಗೆ ನಗರಸಭೆಯ ಕಸ ಸಂಗ್ರಹಣೆ ವಾಹನಕ್ಕೆ ಮಾತ್ರ ಕಸ ಹಾಕಬೇಕು. ಎಲ್ಲೆಂದರಲ್ಲಿ ಕಸ ಬಿಸಾಡಿ ನಗರದ ಅಂದ ಹಾಳು ಮಾಡಬಾರದು ಎಂದು ಸಾರ್ವಜನಿಕರಲ್ಲಿ ವಿನಂತಿಸಿಕೊಳ್ಳಲಾಯಿತು.
ಇದಕ್ಕೆ ಪೂರಕವಾಗಿ ಸ್ಪಂದಿಸಿದ ನಾಗರಿಕರು ನಗರಸಭೆಯ ವಾಹನ ಸರಿಯಾದ ಸಮಯಕ್ಕೆ ಕಳುಹಿಸಲು ಸಂಬಂಧಪಟ್ಟವರು ಕ್ರಮ ತೆಗೆದುಕೊಳ್ಳಬೇಕು. ಒಮ್ಮೊಮ್ಮೆ ಕಸ ಸಂಗ್ರಹಣಾ ವಾಹನ ಬರುವುದೇ ಇಲ್ಲ. ಆಗ ಸಾರ್ವಜನಿಕರು ಕಸವನ್ನು ಎಲ್ಲೆಂದರಲ್ಲಿ ಸುರಿಯುತ್ತಾರೆ. ಇದನ್ನು ತಪ್ಪಿಸಲು ಸೂಕ್ತ ಸಮಯಕ್ಕೆ ವಾಹನ ಕಳುಹಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರಸಭಾ ಸದಸ್ಯ ಸತೀಶ್ ಬಾಬು, ಲಯನ್ಸ್ ಸಂಸ್ಥೆ ಅಧ್ಯಕ್ಷ ಚಂದ್ರೇಗೌಡ, ಕಾರ್ಯದರ್ಶಿ ತಿಪ್ರೇಗೌಡ, ಖಜಾಂಚಿ ರಾಘವೇಂದ್ರಮಯ್ಯ, ನಗರಸಭಾ ಆರೋಗ್ಯ ಎಂಜಿನಿಯರ್ ಕಾಂತರಾಜು, ಮಲವೇಗೌಡ, ಲಯನ್ಸ್ ಸಂಸ್ಥೆ ಸದಸ್ಯ ಶಿವರಾಮು, ಒನ್ ಭೂಮಿ ಫೌಂಡೇಷನ್ ಸಂಸ್ಥೆಯ ಸದಸ್ಯರು ಭಾಗವಹಿಸಿದ್ದರು.