ಈ ಕುರಿತು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಪ್ರತಿಕ್ರಿಯಿಸಿ ‘ಕಾವೇರಿ ನೀರಾವರಿ ನಿಗಮದಿಂದ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಮೆಗಾ ಎಂಜಿನಿಯರ್ಸ್ ಕಂಪನಿ ಕಾಮಗಾರಿ ಗುತ್ತಿಗೆ ಪಡೆದಿದೆ. ಆದರೆ ಅನುಮತಿ ಇಲ್ಲದೆಯೇ ಸ್ಫೋಟಕ ಸಾಮಗ್ರಿ ಬಳಸುತ್ತಿರುವುದು, ಅದರಿಂದ ಮನೆಗಳಿಗೆ ಹಾನಿಯಾಗಿರುವುದು ಕಂಡು ಬಂದಿದೆ. ಇದರಿಂದ ಜಲಾಶಯಕ್ಕೂ ಹಾನಿಯಾಗುವ ಕುರಿತು ಮಾಧ್ಯಮಗಳು ವರದಿ ಮಾಡಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಕಾವೇರಿ ನೀರಾವರಿ ನಿಗಮ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಜಂಟಿ ಸ್ಥಳ ಪರಿಶೀಲನೆ ನಡೆಸಲಿದ್ದಾರೆ. ಎಲ್ಲ ಸಾಧ್ಯತೆಗಳನ್ನೂ ಕೂಲಂಕುಷವಾಗಿ ಪರಿಗಣಿಸಿಯೇ ಅನುಮತಿ ನೀಡಲಾಗುವುದು. ಒಂದೊಮ್ಮೆ ಅದರಿಂದ ಜಲಾಶಯಕ್ಕೆ ಹಾನಿಯಾಗುವ ಸಾಧ್ಯತೆ ಇದ್ದಲ್ಲಿ ಅನುಮತಿ ನಿರಾಕರಿಸುತ್ತೇವೆ’ ಎಂದು ತಿಳಿಸಿದರು.