ಪಟ್ಟಣದ ಬಿಜಿಎಸ್ ವೃತ್ತದಿಂದ ಆರಂಭಗೊಂಡ ಮೆರವಣಿಗೆಯಲ್ಲಿ ನೂರಾರು ಮಂದಿ ಹೆಜ್ಜೆ ಹಾಕಿದರು. ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಕಾರ್ಮಿಕ ಪರ ಘೋಷಣೆ ಕೂಗುತ್ತ ಕಾಲ್ನಡಿಗೆ ಹೊರಟು ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಯ ಮುಂಭಾಗ ಸಮಾವೇಶಗೊಳ್ಳಲಾಯಿತು. ರಾಮನಗರದ ಜೊತೆಗೆ ನೆರೆಯ ಬೆಂಗಳೂರು ಗ್ರಾಮಾಂತರ, ಮಂಡ್ಯ ಮೊದಲಾದ ಜಿಲ್ಲೆಗಳಿಂದ ಜನರು ಬಂದಿದ್ದರು. ಕಾರ್ಮಿಕರ ಜೊತೆಗೆ ಅವರ ಕುಟುಂಬದವರು, ರೈತ, ಕನ್ನಡಪರ, ಕಾರ್ಮಿಕ ಒಕ್ಕೂಟಗಳ ಕಾರ್ಯಕರ್ತರೂ ಹೆಜ್ಜೆ ಹಾಕಿದರು. ಸಂಸದ ಡಿ.ಕೆ. ಸುರೇಶ್, ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ಮತ್ತಿತರರು ಭಾಗಿಯಾದರು.