ರಾಮನಗರ: ಭವಿಷ್ಯ ನಿಧಿ ಸದಸ್ಯರ ಕುಂದುಕೊರತೆಗಳನ್ನು ಆಲಿಸಿ ಬಗೆ ಹರಿಸುವಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್ಒ) ‘ಭವಿಷ್ಯ ನಿಧಿ ನಿಮ್ಮ ಹತ್ತಿರ-2.0’ ಎಂಬ ಅಭಿಯಾನ ಹಮ್ಮಿಕೊಂಡಿದೆ.
ಶುಕ್ರವಾರ ದೇಶದಾದ್ಯಂತ ಏಕ ಕಾಲಕ್ಕೆ ಈ ಅಭಿಯಾನಕ್ಕೆ ಕೇಂದ್ರ ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಆರತಿ ಅಹುಜಾ ಆನ್ಲೈನ್ ಮೂಲಕ ಚಾಲನೆ ನೀಡಿದರು.
500ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸಂಘಟನೆಯ ಅಧಿಕಾರಿ ಮತ್ತು ಸಿಬ್ಬಂದಿಯು ಕಾರ್ಮಿಕ ವರ್ಗದ ಜೊತೆ ಸಂವಾದ ನಡೆಸಿ ಅವರ ಅಹವಾಲು ಗಳನ್ನು ಆಲಿಸಿದರು.
ಅಭಿಯಾನದ ನಿಮಿತ್ತ ಇಪಿಎಫ್ಒ ಆರ್.ಆರ್. ನಗರ ವಲಯ ಕಚೇರಿ ಯಿಂದ ಬಿಡದಿಯ ಹಿಂದೂಸ್ತಾನ್ ಕೋಕಾಕೋಲಾ ಬೇವರೇಜಸ್ ಕಾರ್ಖಾನೆ ಸಭಾಂಗಣದಲ್ಲಿ ಕಾರ್ಮಿಕ ರೊಂದಿಗೆ ಸಂವಾದ ನಡೆಯಿತು. ಇಪಿಎಫ್ಒನ ಆರ್.ಆರ್. ನಗರ ಪ್ರಾದೇಶಿಕ ಕಚೇರಿಯ ಜಾರಿ ಅಧಿಕಾರಿ (ಇ.ಒ) ನವನೀತ್ ಪ್ರಕಾಶ್ ನೇತೃತ್ವದ ತಂಡವು ಕಾರ್ಮಿಕರ ಕುಂದುಕೊರತೆ ಆಲಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ನವನೀತ್, ‘ಸದಸ್ಯರು ಇರುವಲ್ಲಿಗೆ ಸೇವೆ ಒದಗಿಸುವ ಸಲುವಾಗಿ ಈ ಅಭಿಯಾನ ಆರಂಭಿಸಲಾಗಿದೆ. ಈ ಮೊದಲು ಇಪಿಎಫ್ಒ ಕಚೇರಿಗಳಲ್ಲಿ ಮಾತ್ರ ಇಂತಹ ಕಾರ್ಯಕ್ರಮಗಳು ನಡೆಯುತ್ತಿದ್ದವು. ಈಗ ಕೈಗಾರಿಕಾ ವಲಯಗಳಲ್ಲಿನ ಕಚೇರಿಗಳಿಗೆ ಇದನ್ನು ವಿಸ್ತರಿಸಲಾ ಗಿದೆ. ಮುಂದೆ ಪ್ರತಿ ತಿಂಗಳ 27ರಂದು ಸಾರ್ವಜನಿಕ ಸ್ಥಳಗಳಲ್ಲಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು’ ಎಂದು ವಿವರಿಸಿದರು.
‘ಹೆಸರು ತಿದ್ದುಪಡಿ, ಹುಟ್ಟಿದ ದಿನಾಂಕ ಬದಲಾವಣೆ, ಸೇವೆಗೆ ಸೇರಿದ ದಿನಾಂಕ ಬದಲಾವಣೆ ಸೇರಿದಂತೆ ಅಗತ್ಯ ತಿದ್ದುಪಡಿ ಅರ್ಜಿಗಳನ್ನು ಸ್ಥಳ ದಲ್ಲಿಯೇ ಸ್ವೀಕರಿಸಿ ಅದನ್ನು ಪರಿಹರಿಸಲಾಗುವುದು. ಇಪಿಎಫ್ಒ ನಲ್ಲಿ ಖಾತೆ ಹೊಂದಿರುವ ಸದಸ್ಯರಿಗೆ ಸದ್ಯ ವಾರ್ಷಿಕ ಶೇ 8.1ರಷ್ಟು ಬಡ್ಡಿ ಸಿಗುತ್ತಿದೆ. ಇಪಿಎಫ್ಒ ಸೇವೆ ಮತ್ತು ಪ್ರಯೋಜನಗಳ ಕುರಿತು ಸದಸ್ಯರಿಗೆ ಮಾಹಿತಿ ನೀಡಲಾಗುವುದು’ ಎಂದು ವಿವರಿಸಿದರು.
‘ಇಪಿಎಫ್ಒ ಬೆಂಗಳೂರಿನಲ್ಲಿ ಆರ್.ಆರ್. ನಗರ, ರಿಚ್ಮಂಡ್ ಸರ್ಕಲ್, ಯಲಹಂಕ, ಬೊಮ್ಮಸಂದ್ರ, ಕೆ.ಆರ್. ಪುರಂ ಸೇರಿದಂತೆ ವಿವಿಧೆಡೆ ಕಚೇರಿಗಳನ್ನು ಹೊಂದಿದೆ. ನಮ್ಮ ಕಚೇರಿಗಳು ಇಲ್ಲದಿರುವ ಜಿಲ್ಲೆಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿ ಸಲಾಗುವುದು’ ಎಂದು ಮಾಹಿತಿ ನೀಡಿದರು.
ವಲಯ ಕಚೇರಿಯ ಡಿಪಿಎ ರೂಬಿ ಜೋಸೆಫ್, ಎಸ್ಎಸ್ಎ ಸಂಕೇತ್ ಹಾಗೂ ಕೆಂಪರಾಜು ಜೊತೆಗಿದ್ದರು.
ಇಪಿಎಫ್ಒ ಪ್ರಾದೇಶಿಕ ಆಯುಕ್ತ ರಾಜೇಶ್ ಚಂದ್ರ, ಆರ್.ಆರ್. ನಗರ ಒಐಸಿ ಅಧಿಕಾರಿ ಇನಾಕೋಟಿ ಶ್ರೀದೇವಿ ಸೇರಿದಂತೆ ಅನೇಕರು ಆನ್ ಲೈನ್ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.