ರಾಮನಗರ: ಬಿಸಿಲಿನಿಂದ ಬಸವಳಿದಿದ್ದ ರೇಷ್ಮೆನಗರಿ ರಾಮನಗರದಲ್ಲಿ ಸೋಮವಾರ ಸಂಜೆ ಧಾರಾಕಾರ ಮಳೆ ಸುರಿಯಿತು. ಸಂಜೆ 4.50ರ ಸುಮಾರಿಗೆ ಶುರುವಾದ ಮಳೆ ಬಿಡದೆ 6 ಗಂಟೆವರೆಗೆ ಸುರಿಯಿತು.
ದಿಢೀರ್ ಸುರಿದ ಮಳೆಗೆ ಪಾದಚಾರಿಗಳು ಮತ್ತು ದ್ವಿಚಕ್ರ ವಾಹನ ಸವಾರರು ಪರದಾಡಿದರು. ರಸ್ತೆಯ ಅಕ್ಕಪಕ್ಕದ ಕಟ್ಟಡಗಳ ಬಳಿ ನಿಂತು ಮಳೆಯಿಂದ ರಕ್ಷಣೆ ಪಡೆದರು. ಕೆಲ ವಾಹನ ಸವಾರರು ಮಳೆ ಲೆಕ್ಕಿಸದೆ ಹೋಗುತ್ತಿದ್ದ ದೃಶ್ಯ ಕಂಡುಬಂತು. ಮಳೆ ಅಬ್ಬರಕ್ಕೆ ಚರಂಡಿಗಳು ತುಂಬಿ ಹರಿದಿದ್ದರಿಂದ, ನಗರದ ಕೆಲ ರಸ್ತೆಗಳು ಜಲಾವೃತವಾದವು.
ಬೆಂಗಳೂರು–ಮೈಸೂರು ಹೆದ್ದಾರಿ, ರೈಲ್ವೆ ಕೆಳ ಸೇತುವೆ ಸೇರಿದಂತೆ ಕೆಲ ಬಡಾವಣೆಗಳ ರಸ್ತೆಗಳಲ್ಲಿ ಮಳೆ ನೀರು ನಿಂತಿದ್ದರಿಂದ ಹಳ್ಳದಂತಾದವು. ನಗರದ ವಿವಿಧೆಡೆ 24X7 ನೀರು ಪೂರೈಕೆ ಕಾಮಗಾರಿಗಾಗಿ ಅಗೆದಿರುವ ಎಂ.ಜಿ. ರಸ್ತೆ, ಐಜೂರು, ಗಾಂಧಿನಗರ ಸೇರಿದಂತೆ ಹಲವು ಪ್ರದೇಶಗಳ ರಸ್ತೆಗಳು ಕೆಸರುಮಯವಾದವು. ಇದರಿಂದಾಗಿ ಜನರ ಓಡಾಟ ಹಾಗೂ ವಾಹನಗಳ ಸಂಚಾರಕ್ಕೆ ತೊಂದರೆಯಾಯಿತು.
ಒಣಗುವ ಹಂತದಲ್ಲಿದ್ದ ಬೆಳೆಗಳಿಗೆ ಮಳೆರಾಯ ನೀರುಣಿಸಿ ಕರುಣೆ ತೋರಿದ. ಇದರಿಂದಾಗಿ, ‘ಮಳೆ ನಿಂತೇ ಹೋಯಿತು’ ಎಂಬ ಚಿಂತೆಯಲ್ಲಿದ್ದ ರೈತರು, ದಿಢೀರ್ ಸುರಿದ ಮಳೆ ಸಂತಸಗೊಂಡರು. ‘ಇಂದು ಸುರಿದ ಧಾರಾಕಾರ ಮಳೆಯು ಈ ತಿಂಗಳಿಡೀ ಸ್ವಲ್ಪ ಸುರಿದರೆ, ಬೆಳೆಗಳಿಗೆ ಅನುಕೂಲವಾಗಲಿದೆ. ಕೆರೆ–ಕುಂಟೆ,ಹಳ್ಳಗಳಿಗೆ ನೀರು ಬರಲಿದೆ. ಬೆಳೆಗಳ ಜೊತೆಗೆ, ದನ–ಕರುಗಳಿಗೂ ಕುಡಿಯಲು ನೀರು ಸಿಗುತ್ತದೆ. ಮಳೆ ಇಲ್ಲದೆ ಬತ್ತಿರುವ ಜಿಲ್ಲೆಯ ನದಿಗಳಿಗೂ ಜೀವಕಳೆ ಬರಲಿದೆ’ ಎಂದು ರಾಮನಗರದ ರೈತ ಚಂದ್ರೇಗೌಡ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.