ಚನ್ನಪಟ್ಟಣ: ‘ನಾನು ಇದೇ ಜಿಲ್ಲೆಯವನು, ನನಗೆ ಮತ ನೀಡಿ’ ಎಂದು ವಿಧಾನ ಪರಿಷತ್ ಚುನಾವಣಾ ಕಾಂಗ್ರೆಸ್ ಅಭ್ಯರ್ಥಿ ಎಸ್. ರವಿ ಜೆಡಿಎಸ್ ಪಕ್ಷದ ನಗರಸಭಾ ಸದಸ್ಯರಲ್ಲಿ ಮನವಿ ಮಾಡಿದ ಪ್ರಸಂಗ ನಗರದ ನಗರಸಭಾ ಆವರಣದಲ್ಲಿ ಶುಕ್ರವಾರ ನಡೆಯಿತು.
ಚುನಾವಣೆ ಹಿನ್ನೆಲೆಯಲ್ಲಿ ನಗರಸಭಾ ಮತಗಟ್ಟೆ ಬಳಿಗೆ ಬಂದ ಎಸ್. ರವಿ ಅಲ್ಲೆ ನಿಂತಿದ್ದ ಜೆಡಿಎಸ್ ಪಕ್ಷದ ನಗರಸಭಾ ಸದಸ್ಯರ ಬಳಿ ಬಂದು ಮತ ಕೇಳಿದಾಗ ಜೆಡಿಎಸ್ ಸದಸ್ಯರು ಮೌನವಾದರು. ನಂತರ ರವಿ ಅವರು ‘ಏನಾದರೂ ಮಾತನಾಡಿ, ಯಾಕೆ ಸುಮ್ಮನೆ ನಿಂತಿದ್ದೀರಿ. ನಮ್ಮನ್ನು ಹತ್ತಿರಕ್ಕೂ ಸೇರಿಸೊಲ್ಲವಾ ನೀವು’ ಎಂದು ಕೈಮುಗಿದು ಹಾಸ್ಯ ಚಟಾಕಿ ಹಾರಿಸಿದರು. ಆಗ ಸದಸ್ಯರೆಲ್ಲರೂ ನಕ್ಕರು.
‘ನಾನು ನಿಮ್ಮ ಜಿಲ್ಲೆಯವನು. ನಮ್ಮ ಜಿಲ್ಲೆಯವರು ನಮ್ಮ ಜಿಲ್ಲೆಯ ಅಭ್ಯರ್ಥಿಗೆ ಮತ ಹಾಕಬೇಕು. ಪಕ್ಷ ನೋಡಬಾರದು’ ಎಂದು ಹಾಸ್ಯವಾಗಿಯೇ ರವಿ ಮಾತನಾಡಿದರು. ‘ನಾನೇ ನಿಮ್ಮ ಬಳಿ ಬಂದು ಮಾತನಾಡುತ್ತಿದ್ದೇನೆ. ನೀವು ಸುಮ್ಮನೆ ನಿಂತಿದ್ದರೆ ನಮಗೆ ಬೇಸರವಾಗುತ್ತದೆ’ ಎಂದಾಗ ಎಲ್ಲರೂ ನಕ್ಕರು.
ನಗರಸಭಾ ಅಧ್ಯಕ್ಷ ಪ್ರಶಾಂತ್, ಸದಸ್ಯರಾದ ಸತೀಶ್ ಬಾಬು, ಮಂಜುನಾಥ್, ಲಿಯಾಕತ್ ಆಲಿಖಾನ್, ನಾಗೇಶ್ ಇದ್ದರು.
ಜೆಡಿಎಸ್ ಪರ ಒಲವು: ಈ ಬಾರಿಯ ಪರಿಷತ್ ಚುನಾವಣೆಯನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದ್ದು, ಜೆಡಿಎಸ್ ಅಭ್ಯರ್ಥಿ ರಮೇಶ ಗೌಡ ಗೆಲುವು ಸಾಧಿಸಲಿದ್ದಾರೆ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ರಾಮನಗರದಲ್ಲಿ ಪ್ರತಿಕ್ರಿಯಿಸಿದರು.
ಇಲ್ಲಿನ ನಗರಸಭೆ ಮತಗಟ್ಟೆಯಲ್ಲಿ ಶುಕ್ರವಾರ ಮತ ಚಲಾಯಿಸಿದ ಬಳಿಕ ಅವರು ಪತ್ರಕರ್ತರ ಜೊತೆ ಮಾತನಾಡಿದರು.