ಮಾಗಡಿ: ಶಿಕ್ಷಣಹಕ್ಕು ಕಾಯ್ದೆಗೆ ಸೂಕ್ತ ತಿದ್ದುಪಡಿ ಮಾಡುವ ಮೂಲಕ ಆರಂಭಿಕ ಮಕ್ಕಳ ಅಭಿವೃದ್ಧಿ, ಪೂರ್ವ ಪ್ರಾಥಮಿಕ ಶಿಕ್ಷಣ ಮತ್ತು ಪ್ರೌಢ ಶಿಕ್ಷಣವನ್ನು ಉನ್ನತೀಕರಿಸಬೇಕು. ಅಲ್ಲದೆ, ಜನಪದ ಐತಿಹ್ಯ ಸೇರ್ಪಡೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸಮನ್ವಯ ವೇದಿಕೆ ಕಾರ್ಯದರ್ಶಿ ಎಚ್.ಆರ್.ಸವಿತಾ ತಿಳಿಸಿದರು.
ಪಟ್ಟಣದ ಉರ್ದು ಶಾಲೆ ಆವರಣದಲ್ಲಿ ಗುರುವಾರ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಶಿಕ್ಷಣ ಹಕ್ಕಿಗಾಗಿ ಜನಾಂದೋಲನ ಸಮನ್ವಯ ಸಮಿತಿ ವತಿಯಿಂದ ರಾಷ್ಟ್ರೀಯ ಆಂದೋಲನ ಆರಂಭಿಸಲಾಗುವುದು. ದೇಶದ ಒಟ್ಟು ಉತ್ಪನ್ನದಲ್ಲಿ ಶೇ 6ರಷ್ಟನ್ನು ಶಿಕ್ಷಣಕ್ಕೆ ಮೀಸಲಿಡಬೇಕು ಎಂದು ಒತ್ತಾಯಿಸಿದರು.
ಸರ್ಕಾರಿ ಶಾಲೆಗಳನ್ನು ಸಬಲೀಕರಣಗೊಳಿಸಿ, ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುವ ವಾತಾವರಣ ನಿರ್ಮಾಣವಾಗಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳ ಹಗಲು ದರೋಡೆಗೆ ಕಡಿವಾಣ ಹಾಕಲು ಹೋರಾಟ ಮಾಡಲಾಗುವುದು ಎಂದರು.
ಸಮನ್ವಯ ಸಮಿತಿ ಅಧ್ಯಕ್ಷ ಅಶೋಕ. ಬಿ.ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಖಜಾಂಚಿ ರೇವಣ್ಣ, ಉಪಾಧ್ಯಕ್ಷ ವೆಂಕಟಯ್ಯ, ಮಾಡಬಾಳ್ ನಾಗೇಶ್, ನಗರ ಘಟಕದ ಅಧ್ಯಕ್ಷ ಅನ್ಸರ್ ಪಾಷಾ, ಹೊಂಬಾಳಮ್ಮನಪೇಟೆ ಸುಜಾತ, ಚಿಕ್ಕಮುನಿಯಪ್ಪ ಮಾತನಾಡಿದರು.