ಮಾಗಡಿ: ತಾಲ್ಲೂಕಿನ ಜ್ಯೋತಿಪಾಳ್ಯದ ‘ಅಜ್ಜಿ ಮನೆ’ಯ ಸಂಸ್ಥಾಪಕಿ ಸಬಿಹಾ ಹಷ್ಮಿ (73) ಅನಾರೋಗ್ಯದಿಂದ ಮಂಗಳವಾರ ರಾತ್ರಿ ನಿಧನರಾದರು.
ಮೂಲತಃ ಉತ್ತರ ಪ್ರದೇಶದ ಅಲಿಗಡದ ಸಬಿಹಾ ದೆಹಲಿಯಲ್ಲಿ ಲಲಿತ ಕಲೆ ವಿಷಯದಲ್ಲಿ ಪದವಿ ಮುಗಿಸಿ ಅಲ್ಲಿಯೇ ಕಲಾ ಶಿಕ್ಷಕಿಯಾಗಿ ಸೇವೆಗೆ ಸಲ್ಲಿಸಿದ್ದರು. 2007ರಲ್ಲಿ ಸ್ವಯಂ ನಿವೃತ್ತಿ ಪಡೆದು ಮಗನ ಜೊತೆ ಬೆಂಗಳೂರಿಗೆ ಬಂದು ನೆಲೆಸಿದ್ದರು.
ಜ್ಯೋತಿಪಾಳ್ಯದಲ್ಲಿ ಜಮೀನು ಖರೀದಿಸಿ ಇಲ್ಲಿಯೇ ‘ಅಜ್ಜಿ ಕಲಿಕಾ ಕೇಂದ್ರ’ ಹೆಸರಿನ ತರಬೇತಿ ಕೇಂದ್ರ ಆರಂಭಿಸಿದ್ದರು. ಸುತ್ತಲಿನ ಬಡ ಮಕ್ಕಳಿಗೆ ವಿವಿಧ ರೀತಿಯ ತರಬೇತಿ ನೀಡುತ್ತಿದ್ದರು. ಸುತ್ತಮುತ್ತಲಿನ ಗ್ರಾಮಗಳ ಮಕ್ಕಳಿಗೆ ಪ್ರೀತಿಯ ‘ಅಜ್ಜಿ’ಯಾಗಿದ್ದರು.
ಅವರಿಗೆ ಮಗಳು ಶಬನಾ ಮಿತ್ರ, ಪುತ್ರರಾದ ಗೆನೆ, ಫರ್ವೇಜ್ ಹಾಗೂ ತಂಗಿ ಶಬನಂ ಹಷ್ಮಿ ಸೇರಿದಂತೆ ಸಹೋದರ– ಸಹೋದರಿಯರು ಇದ್ದಾರೆ. ಜ್ಯೋತಿಪಾಳ್ಯದಲ್ಲಿ ಬುಧವಾರ ಬೆಳಿಗ್ಗೆ ಪಾರ್ಥಿವ ಶರೀರವನ್ನು ದರ್ಶನಕ್ಕೆ ಇಡಲಾಗಿತ್ತು. ಬಳಿಕ ಕೆಂಗೇರಿಯ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.