ಕೋಡಿಹಳ್ಳಿ (ಕನಕಪುರ): ಇಲ್ಲಿನ ಕೋಡಿಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಕಾಂಗ್ರೆಸ್ ಬೆಂಬಲಿತ ಕೆ.ಟಿ. ಕೆಂಚೇಗೌಡ ಮತ್ತು ಬೋಳಮಾದಯ್ಯ ಅಧ್ಯಕ್ಷ- ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆಗಾಗಿ ನಡೆದಿದ್ದ ಚುನಾವಣೆಯಲ್ಲಿ 11 ನಿರ್ದೇಶಕರು ಅವಿರೋಧವಾಗಿ ಅಯ್ಕೆಯಾಗಿದ್ದರು. ಈ ಸ್ಥಾನಗಳಿಗೆ ಚುನಾವಣಾಧಿಕಾರಿ ಡಿ.ಎಂ.ಮಹಮ್ಮದ್ ನದೀಮ್ ಚುನಾವಣೆ ನಡೆಸಿದರು.
ಎರಡೂ ಸ್ಥಾನಗಳಿಗೆ ಒಂದೊಂದೇ ನಾಮಪತ್ರ ಬಂದಿದ್ದರಿಂದ ಇಬ್ಬರನ್ನೂ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಸಂಘದ ವಿಶೇಷ ಅಧಿಕಾರಿ ಮಲ್ಲೇಶಯ್ಯ, ಮುಖ್ಯ ಕಾರ್ಯ ನಿರ್ವಾಹಕ ನಂಜೇಗೌಡ ಉಪಸ್ಥಿತರಿದ್ದರು.
ಸಂಘದ ನಿರ್ದೇಶಕರಾದ ರಾಜೇಂದ್ರ, ಮಾದೇಗೌಡ, ಶಿವಣ್ಣ, ಶಿವಕುಮಾರ್, ವೆಂಕಟೇಶ್, ವಿದ್ಯಾ, ಸರೋಜಮ್ಮ, ಮುನಿಮಾದಯ್ಯ, ಶಿವರುದ್ರ ಹಾಗೂ ಬಿಡಿಸಿಸಿ ಬ್ಯಾಂಕ್ ಪ್ರತಿನಿಧಿ ಎಚ್.ಗೋಪಾಲಕೃಷ್ಣ ಚುನಾವಣೆಯಲ್ಲಿ ಪಾಲ್ಗೊಂಡಿದ್ದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ಬಸಪ್ಪ, ಕಾಂಗ್ರೆಸ್ ಮುಖಂಡರಾದ ಕೆ.ಎಂ. ರಾಜೇಂದ್ರ, ಕೆ.ಎಂ.ಮಾದೇಶ್, ರಮೇಶ್, ಸೋಮಣ್ಣ, ಚಿಂದಾರಿಗೌಡ, ಗಣೇಶ್, ಲೋಕೇಶ್, ದುಂಡುಮಾದಯ್ಯ, ಮುನಿಯಪ್ಪ, ನಂಜೇಗೌಡ, ಗ್ರಾಮ ಪಂಚಾಯಿತಿ ಸದಸ್ಯರು, ಸ್ಥಳೀಯ ಮುಖಂಡರು ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಅಭಿನಂದಿಸಿದರು.