ಚನ್ನಪಟ್ಟಣ: ಪ್ರಸಕ್ತವಾಗಿ ಸಮಾಜದಲ್ಲಿ ನಡೆಯುವ ವಾಸ್ತವಗಳನ್ನು ಕಿರುಚಿತ್ರಗಳಲ್ಲಿ ಬಿಂಬಿಸಬೇಕು ಎಂದು ಕಲಾವಿದ ಜೂನಿಯರ್ ವಿಷ್ಣುವರ್ಧನ್ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದ್ದ ಸಾಹಿತಿ ಶ್ರೀನಿವಾಸ ರಾಂಪುರ ಅವರ ಕಾದಂಬರಿ ಆಧಾರಿತ ಲಕ್ಷ್ಮೀಪುರ ಕೃಷ್ಣಮೂರ್ತಿ ನಿರ್ದೇಶನದ `ಸಂಗಾತಿಯ ಸವಿನೆನಪು' ಕಾಲ್ಪನಿಕ ಕಿರುಚಿತ್ರದ ಸಿ.ಡಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಸಿನಿಮಾ ಹಾಗೂ ಕಿರುಚಿತ್ರಗಳನ್ನು ನಿರ್ಮಾಣ ಮಾಡುವುದು ಸಾಮಾನ್ಯದ ವಿಚಾರವಲ್ಲ. ಇಂತಹ ಸಾಹಸಕ್ಕೆ ಕೈ ಹಾಕುವವರು ಸಾಕಷ್ಟು ಮಂದಿ ನಷ್ಟಕ್ಕೊಳಗಾಗಿ ಕೈ ಸುಟ್ಟುಕೊಂಡಿರುವ ಜ್ವಲಂತ ಸಾಕ್ಷಿಗಳಿವೆ. ಸಿನಿಮಾ ಹಾಗೂ ಕಿರುಚಿತ್ರಗಳನ್ನು ನಿರ್ಮಾಣ ಮಾಡಲು ಅವಶ್ಯಕವಾಗಿರುವ ಸಂಪನ್ಮೂಲವನ್ನು ಒದಗಿಸಲು ನಿರ್ಮಾಪಕರ ಕೊರತೆ ಇದೆ. ಕಿರುಚಿತ್ರಗಳ ನಿರ್ಮಾಣಕ್ಕೆ ಮುಂದೆ ಬರಬೇಕು ಎಂದರು.
ನಿರ್ಮಾಪಕ ಕೆ.ವಿ.ಕೃಷ್ಣಪ್ಪ ಮಾತನಾಡಿ, ಪ್ರತಿಭೆಗಳನ್ನು ಹೊರ ತೆಗೆದು ಅವರಿಗೆ ವೇದಿಕೆಗಳನ್ನು ನೀಡಿದಾಗ ಮಾತ್ರ ಉತ್ತಮ ಪ್ರತಿಭೆಗಳು ಬೆಳಕಿಗೆ ಬರಲು ಸಾಧ್ಯ. ಕಾದಂಬರಿ ಆಧಾರಿತ ಸಂಗಾತಿಯ ಸವಿನೆನಪು ಕಿರುಚಿತ್ರದಲ್ಲಿ ಅನೇಕ ಯುವ ಕಲಾವಿದರು ಉತ್ತಮವಾಗಿ ಅಭಿನಯಿಸಿದ್ದಾರೆ ಎಂದರು.
ನಿರ್ದೇಶಕ ಲಕ್ಷ್ಮೀಪುರ ಕೃಷ್ಣಮೂರ್ತಿ ಮಾತನಾಡಿದರು. ಕಾರ್ಯಕ್ರಮದಲ್ಲಿ ರಂಗಭೂಮಿ ನಿರ್ದೇಶಕರಾದ ಮಳೂರುಪಟ್ಟಣದ ಕೃಷ್ಣಪ್ಪ, ಬೆಳಕೆರೆ ಕೆಂಪೇಗೌಡ, ಸಾಹಿತಿ ಶ್ರೀನಿವಾಸ್ ರಾಂಪುರ ಹಾಗೂ ವ್ಯಂಗ್ಯಚಿತ್ರಕಾರ ರಮೇಶ್ ಅಕ್ಕೂರು ಅವರನ್ನು ಸನ್ಮಾನಿಸಲಾಯಿತು.
ಕಲಾವಿದರಾದ ರಘುಗೌಡ, ಕೂರಣಗೆರೆ ಅಪ್ಪಾಜಿ, ಕೆ.ಜಿ.ರಾಜು, ಎಲೇಕೇರಿ ಧನು, ರಂಗಪ್ಪ, ಶಂಭುಗೌಡ ನಾಗವಾರ, ರಾಮಕೃಷ್ಣ ಕೂರಣಗೆರೆ, ಮಂಜೇಶ್ ಬಾಬು, ಸಾಹಿತಿ ವಿಜಯ ರಾಂಪುರ, ಅಪ್ಪಗೆರೆ ಅರುಣ್ ಭಾಗವಹಿಸಿದ್ದರು.