ಮಾಗಡಿ: ಕೆಂಪೇಗೌಡ ಅಭಿವೃದ್ಧಿ ಸಮಿತಿಯಿಂದ ಜಯಂತ್ಯುತ್ಸವ ಸಡಗರದಿಂದ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ 19ನೇ ವರ್ಷದ ಸರಳ ಸಾಮೂಹಿಕ ವಿವಾಹ ನಡೆಯಿತು.
ಸಮಿತಿ ಅಧ್ಯಕ್ಷ ಎಚ್.ಎಂ.ಕೃಷ್ಣಮೂರ್ತಿ ಮತ್ತು ತಹಶೀಲ್ದಾರ್ ಎನ್.ರಮೇಶ್ ಕೆಂಪಾಪುರದ ಸ್ಮಾರಕರಿಂದ ಬೆಂಗಳೂರಿಗೆ ಹೊರಟ ಕೆಂಪೇಗೌಡ ಜ್ಯೋತಿಗೆ ಚಾಲನೆ ನೀಡಿದರು.
ಬರಗಾಲದಲ್ಲಿ ದುಂದು ವೆಚ್ಚಮಾಡಿ ಅದ್ದೂರಿ ಮದುವೆ ಮಾಡಿ ಸಾಲಗಾರರಾಗುವ ಬದಲು ಸರಳ ಸಾಮೂಹಿಕ ವಿವಾಹಗಳಲ್ಲಿ ರೈತಾಪಿವರ್ಗದವರು ತಮ್ಮ ಮಕ್ಕಳ ವಿವಾಹ ಮಾಡಲು ಮುಂದಾಗಬೇಕು ಎಂದು ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಎಂ.ಕೃಷ್ಣಮೂರ್ತಿ ಕಿವಿಮಾತು ಹೇಳಿದರು.
ಕೆಂಪೇಗೌಡರ ಆದರ್ಶ ಜೀವನ ಎಲ್ಲರೂ ಪಾಲಿಸಬೇಕಾಗಿದೆ. ಸ್ಮಾರಕ, ಕೆರೆಕಟ್ಟೆ, ಗುಡಿಗೋಪುರ ರಕ್ಷಿಸಬೇಕಾಗಿದೆ. ಅಭಿವೃದ್ಧಿ ಕಾಮಗಾರಿ ಆರಂಭಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.
ಜ್ಯೋತಿ ಯಾತ್ರೆಗೆ ಚಾಲನೆ ನೀಡಿದ ತಹಶೀಲ್ದಾರ್ ಎನ್.ರಮೇಶ್ ಮಾತನಾಡಿ, ಭೂಮಿಪುತ್ರರಾದ ಕೆಂಪೇಗೌಡ ವಂಶಜರ ಅಭಿವೃದ್ಧಿ ದೂರದರ್ಶಿತ್ವದಿಂದ ಕೂಡಿತ್ತು. ಜಲಮೂಲ ಸಂರಕ್ಷಣೆ ಹೊಣೆ ಎಲ್ಲರಿಗೂ ಸೇರಿದೆ ಎಂದರು.
ಕಾಂಗ್ರೆಸ್ ಮುಖಂಡರಾದ ಕಮಲಮ್ಮ ಹನುಮಂತೇಗೌಡ ಮಾತನಾಡಿ, ಕೆಂಪೇಗೌಡ ನಿರ್ಮಿಸಿದ್ದ ಬೆಂಗಳೂರು ಈಗ ಅಂತರರಾಷ್ಟ್ರೀಯ ಮನ್ನಣೆ ಗಳಿಸಿದೆ. ಮುಂದಿನ ದಿನಗಳಲ್ಲಿ ಸಾವನದುರ್ಗ, ಹುಲಿಕಲ್,ಮಾಗಡಿ ಅಭಿವೃದ್ಧಿಗೆ ಯತ್ನ ನಡೆದಿದೆ ಎಂದರು.
ಕಾಳಾರಿಕಾವಲ್ ಗ್ರಾಮಪಂಚಾಯಿತಿ ಸದಸ್ಯರಾದ ಶಿವರಾಮಯ್ಯ, ಧನಂಜಯ, ಮುಖಂಡರಾದ ಗಂಗಾಧರ್, ಸುರೇಶ್, ಕೆಂಪೇಗೌಡ ಅಭಿವೃದ್ದಿ ಸಮಿತಿ ಎಂ.ಎಚ್.ಗಂಗಾಧರ್, ಪುಷ್ಪಾ ಕೃಷ್ಣಮೂರ್ತಿ, ದೀಪಿಕಾ ಅಜಯ್, ಜೆ.ಸಿ.ನಾಗರಾಜು, ಕೆಂಪಾಪುರದ ನಟರಾಜು, ಕಲಾವಿದ ಹೊಸಹಳ್ಳಿ ಪುಟ್ಟಸ್ವಾಮಿ, ಸಾತನೂರು ಗುಂಡಣ್ಣ, ಬೆಳಗುಂಬ ವಿಶ್ವನಾಥ, ಶತಾಯುಷಿ ಸಿದ್ದಪ್ಪ, ಅಂಬಿಕಾರಂಗಸ್ವಾಮಿ, ಖಾಸಗಿ ಬಸ್ ಮಾಲೀಕ ಪರಮಶಿವಯ್ಯ, ನೆಸೆಪಾಳ್ಯದ ಲಕ್ಷ್ಮಣಗೌಡ, ಕುದೂರಿನ ಶೇಷಪ್ಪ, ಅಂಚೆಪಾಳ್ಯ ಮಾರಯ್ಯ ಗೋಪಿ, ಕೆಂಪೇಗೌಡರ ಸಾಧನೆ ಕುರಿತು ಮಾತನಾಡಿದರು.
ಕೆಂಪೇಗೌಡ ಅಭಿವೃದ್ಧಿ ಸಮಿತಿಯ ನಾಯ್ಡು, ಆನಂದ್, ಮೋಹನ್, ಗೋಪಿ, ಹೇಮಂತ್, ಹುಚ್ಚಹನುಮೇಗೌಡನ ಪಾಳ್ಯದ ಗ್ರಾಮಸ್ಥರು ಇದ್ದರು.
ವಿವಿಧ ಸರ್ಕಾರಿ ಕಚೇರಿಗಳಲ್ಲಿ ಸಾಂಕೇತಿಕವಾಗಿ ಕೆಂಪೇಗೌಡರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ಪೂಜೆ: ಬಿಜಪೆ ಮುಖಂಡ ಎ.ಎಚ್.ಬಸವರಾಜು ಕೆಂಪೇಗೌಡ ಜಯಂತಿ ಅಂಗವಾಗಿ ಪುರಸಭೆ ಆವರಣದಲ್ಲಿ ಇರುವ ಪುತ್ಥಳಿಗೆ ಪೂಜೆ ಸಲ್ಲಿಸಿದರು. ಮುಖಂಡರಾದ ರಾಘವೇಂದ್ರ, ಮಾರಪ್ಪ ದೊಂಬಿದಾಸ, ಧನಂಜಯ, ನರಸಿಂಹಣ್ಣ, ಗೋಪಾಲಕೃಷ್ಣ ಇದ್ದರು.
ಕೆಂಪೇಗೌಡ ಪ್ರೌಢಶಾಲೆ ಆವರಣದಲ್ಲಿ ಒಕ್ಕಲಿಗರ ಸಂಘದಿಂದ ಜಯಂತಿ ಆಚರಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.