ಕೋಡಿಹಳ್ಳಿ (ಕನಕಪುರ): ಕೋಡಿಹಳ್ಳಿ ಗ್ರಾಮ ಪಂಚಾಯಿತಿಯ ಮಾರಸಂದ್ರದ ಗ್ರಾಮ ಪಂಚಾಯಿತಿ ಸದಸ್ಯರ ಆಯ್ಕೆಗಾಗಿ ನಡೆಯಲಿರುವ ಉಪ ಚುನಾವಣೆಗೆ ಪವನ್ ಕುಮಾರ್ ಪಿ. ಎಂಬುವವರು ಗುರುವಾರ ನಾಮಪತ್ರ ಸಲ್ಲಿಸಿದರು.
ಮಾರಸಂದ್ರ ಗ್ರಾಮ ಪಂಚಾಯಿತಿಯ ಸದಸ್ಯರಾಗಿದ್ದ ಎಂ.ಡಿ.ಪುಟ್ಟಸ್ವಾಮಿ ಅಕಾಲಿಕ ಮರಣಕ್ಕೆ ತುತ್ತಾಗಿದ್ದರಿಂದ ಅವರಿಂದ ತೆರವಾದ ಸ್ಥಾನಕ್ಕೆ ಚುನಾವಣೆ ಮೇ 29 ರಂದು ಚುನಾವಣೆ ನಡೆಯಲಿದೆ.
ಸದಸ್ಯ ಸ್ಥಾನಕ್ಕೆ ಮೇ 13 ರಿಂದ ನಾಮಪತ್ರ ಸಲ್ಲಿಸುವ ಅವಕಾಶವಿದೆ. ಗುರುವಾರದವರೆಗೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿರಲಿಲ್ಲ. ಗುರುವಾರ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು ಪವನ್ಕುಮಾರ್ ಪಿ. ಎಂಬುವರು ಮಾತ್ರ ನಾಮಪತ್ರ ಸಲ್ಲಿಸಿದ್ದಾರೆ.
ಶುಕ್ರವಾರ ನಾಮಪತ್ರ ಪರಿಷ್ಕರಣೆಯಾಗಲಿದೆ. ಮೇ 20ರಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ. ಚುನಾವಣೆಗೆ ಒಂದೇ ನಾಮಪತ್ರ ಸಲ್ಲಿಕೆಯಾಗಿರುವುದರಿಂದ ನಾಮಪತ್ರ ಸಲ್ಲಿಸಿರುವವರನ್ನೇ ಅವಿರೋಧವಾಗಿ ಆಯ್ಕೆ ಮಾಡುವುದಾಗಿ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಶಿಕ್ಷಣ ಇಲಾಖೆಯ ಗಂಗಾಧರಯ್ಯ ಸಿ. ತಿಳಿಸಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್.ಎಂ.ಕೃಷ್ಣಮೂರ್ತಿ ಸಹಾಯಕ ಚುನಾವಣಾಧಿಕಾರಿಯಾಗಿದ್ದರು. ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೆ.ಎಂ.ಮಾದೇಶ್, ಪಂಚಾಯಿತಿ ಅಧ್ಯಕ್ಷ ನಂದೀಶ್ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು, ಮಾರಸಂದ್ರ ಗ್ರಾಮದ ಮುಖಂಡರು ನಾಮ ಪತ್ರ ಸಲ್ಲಿಕೆಯ ವೇಳೆ ಇದ್ದರು.