ಸೂಲಿಬೆಲೆ: ‘ಸಾಮಾಜಿಕ ಕಾಳಜಿ ಹಾಗೂ ಸೇವಾ ಮನೋಭಾವನೆಯ ಆಶಯವನ್ನು ಸಂಘ ಸಂಸ್ಥೆಗಳು, ಟ್ರಸ್ಟ್ಗಳು ಹೊಂದಿರಬೇಕು’ ಎಂದು ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಶರತ್ ಬಚ್ಚೇಗೌಡ ಹೇಳಿದರು.
ಸೂಲಿಬೆಲೆ ಶಾರದಾ ಮಂದಿರದಲ್ಲಿ ನಡೆದ ಜೇನುಗೂಡು ರೂರಲ್ ಡೆವಲಪ್ಮೆಂಟ್ ಕಲ್ಚರಲ್ ಟ್ರಸ್ಟ್ ಉದ್ಘಾಟಿಸಿ ಮಾತನಾಡಿದರು.
‘ಜೇನುನೊಣಗಳು ಮಕರಂದವನ್ನು ಸಂಗ್ರಹಿಸಿ, ತುಪ್ಪವನ್ನು ಮಾಡುವ ಮೂಲಕ ಮನುಷ್ಯ ಸಮಾಜಕ್ಕೆ ಕೊಡುಗೆಯಾಗಿರುವ ಹಾಗೆ ಸಮಾಜ ಮತ್ತು ಶೋಷಿತರ, ದೀನ ದುರ್ಬಲರ ಶ್ರೇಯಸ್ಸಿಗೆ ಟ್ರಸ್ಟ್ ಮೊದಲ ಆದ್ಯತೆ ನೀಡುವಂತಾಗಬೇಕು’ ಎಂದರು.
ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ವಿ.ಸತೀಶಗೌಡ ಮಾತನಾಡಿ, ‘ಜನಪರ ಕಾಳಜಿ ಹಾಗೂ ಸ್ವಾರ್ಥ ರಹಿತ ಉದ್ದೇಶಗಳನ್ನು ಭಗವಂತ ನೇರವೇರಿಸಲಿ’ ಎಂದು ಶುಭ ಕೋರಿದರು.
ಟ್ರಸ್ಟ್ ಉಪಾಧ್ಯಕ್ಷ ಕೆ.ಎಂ.ಚೌಡೇಗೌಡ ಮಾತನಾಡಿ, ‘ನಮ್ಮ ಟ್ರಸ್ಟ್ನ ಮೂಲ ಆಶಯ ಗ್ರಾಮೀಣ ಭಾಗದ ಮಕ್ಕಳಿಗೆ ಶಿಕ್ಷಣ, ಅಭಿವೃದ್ಧಿ ಹಾಗೂ ಕಲೆ, ಸಂಸ್ಕೃತಿಗೆ ಪ್ರೋತ್ಸಾಹ ನೀಡುವುದಾಗಿದೆ’ ಎಂದರು.
ಶಿಕ್ಷಣ ತಜ್ಞ ದೇವಿದಾಸ್ ಸುಬ್ರಾಯ್ ಶೇಠ್, ಟ್ರಸ್ಟ್ ಅಧ್ಯಕ್ಷ ರವಿಕಿರಣ್, ಪ್ರಧಾನ ಕಾರ್ಯದರ್ಶಿ ಬಿ.ಎಂ.ಗೋಪಿನಾಥ್ ಹಾಗೂ ಪದಾಧಿಕಾರಿಗಳು ಇದ್ದರು.