ರಾಮನಗರ: ರಾಜ್ಯದಲ್ಲಿ ಯಾರು ಯಾರ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂಬುದು ಎಲ್ಲರಿಗೂ ತಿಳಿಸಿದೆ. ಕುತಂತ್ರ ಮಾಡುವವರೇ ಕುತಂತ್ರದ ಬಗ್ಗೆ ಆರೋಪ ಮಾಡೋದು ಹಾಸ್ಯಾಸ್ಪದ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ತಿರುಗೇಟು ನೀಡಿದರು.
ನಗರದ ಆರ್ವಿಸಿಎಸ್ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದ ಸಂದರ್ಭ ಪತ್ರಕರ್ತರ ಜೊತೆ ಅವರು ಮಾತನಾಡಿದರು. ಮಂಡ್ಯದ ರೀತಿ ರಾಮನಗರದಲ್ಲೂ ಕುತಂತ್ರ ರಾಜಕಾರಣ ನಡೆದಿದೆ ಎಂಬ ನಿಖಿಲ್ ಆರೋಪಕ್ಕೆ ಪ್ರತಿಕ್ರಿಯಿಸಿದ ಸುಮಲತಾ ‘ ಕುತಂತ್ರ ಏನಾದ್ರೂ ನಡೆದಿದ್ದರೆ ಅದು ನನ್ನ ವಿರುದ್ಧ. ಲೋಕಸಭೆ ಚುನಾವಣೆಯಲ್ಲಿ ನಾಲ್ಕು ಜನ ಸುಮಲತಾ ಎಂಬ ಹೆಸರಿನವರನ್ನು ನಿಲ್ಲಿಸಿದ್ದರು’ ಎಂದು ನೆನಪಿಸಿದರು.
‘ ವಿಜಯಪುರದಲ್ಲಿ ಜೆಡಿಎಸ್ ಅಭ್ಯರ್ಥಿ ಕಾಂಗ್ರೆಸ್ ಗೆ ಬಹಿರಂಗ ಬೆಂಬಲ ನೀಡಿದ್ದಾರೆ. ಇದೇ ರೀತಿ ರಾಜ್ಯದ ನಾಲ್ಕು ಕಡೆ ಜೆಡಿಎಸ್ ಕಾಂಗ್ರೆಸ್ ಗೆ ಬೆಂಬಲ ನೀಡಿದೆ. ರಾಮನಗರದಲ್ಲಿಯೂ ಹೊಂದಾಣಿಕೆ ರಾಜಕಾರಣ ಇದ್ದು, ಇದೇ ಕಾರಣಕ್ಕೆ ಕಾಂಗ್ರೆಸ್ ಪ್ರಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿಲ್ಲ’ ಎಂದು ದೂರಿದರು.
‘ ರಾಜ್ಯದ ಜನರು ಪ್ರಧಾನಿ ನರೇಂದ್ರ ಮೋದಿ ನಾಯಕತ್ವ ಮೆಚ್ಚಿದ್ದು, ಅವರ ಆಗಮನದಿಂದ ಹಳೇ ಮೈಸೂರು ಭಾಗದಲ್ಲಿ ಪಕ್ಷಕ್ಕೆ ಶಕ್ತಿ ಬಂದಿದೆ. ಜನಸಾಮಾನ್ಯರಿಗೆ, ಯುವಜನರಿಗೆ ಇಲ್ಲಿ ಟಿಕೆಟ್ ನೀಡುತ್ತಿದ್ದು, ಕುಟುಂಬ ರಾಜಕಾರಣಕ್ಕೆ ಅವಕಾಶ ಇಲ್ಲ’ ಎಂದು ಹೇಳಿದರು.
ಸಭೆಯಲ್ಲಿ ಸುಮಲತಾ ಅವರೊಂದಿಗೆ ಕ್ಷೇತ್ರದ ಚುನಾವಣಾ ಉಸ್ತುವಾರಿ ಆಜಾದ್ ಸಿಂಗ್, ಬಿಜೆಪಿ ಅಭ್ಯರ್ಥಿ ಗೌತಮ್ ಗೌಡ, ಕೆಆರ್ಐಡಿಎಲ್ ಅಧ್ಯಕ್ಷ ರುದ್ರೇಶ್ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡರು.