ಕನಕಪುರ: ಕೇಂದ್ರ ಸರ್ಕಾರದ ಇ-ನ್ಯಾಮ್ ಯೋಜನೆಯಡಿ ರೈತರು ನೇರವಾಗಿ ಖರೀದಿದಾರರ ಜತೆ ಲಾಭದಾಯಕವಾಗಿ ತಮ್ಮ ವ್ಯವಸಾಯೋತ್ಪನ್ನಗಳನ್ನು ಮಾರಾಟ ಮಾಡುವ ಅವಕಾಶ ಬರಲಿದೆ. ಇದರ ಸದುಪಯೋಗ ಪಡೆಯಬೇಕೆಂದು ಎಪಿಎಂಸಿ ಮಹಾಪ್ರಬಂಧಕಿ ವಾಣಿಶ್ರೀ ತಿಳಿಸಿದರು.
ಇಲ್ಲಿನ ಕೋಟೆ ರಂಗನಾಥಸ್ವಾಮಿ ದೇಗುಲದ ಆವರಣದಲ್ಲಿ ಜಿಲ್ಲಾ ಮಾವು ಮತ್ತು ತೆಂಗು ಉತ್ಪಾದನಾ ರೈತ ಒಕ್ಕೂಟದಡಿ ಎನ್ಡಿಆರ್ಎಸ್ ಸಂಸ್ಥೆ ಸಹಕಾರದೊಂದಿಗೆ ಏರ್ಪಡಿಸಿದ್ದ ಮಾವು ಮತ್ತು ತೆಂಗು ಉತ್ಪಾದನಾಶಕ್ತ ರೈತ ಗುಂಪಿನ ತರಬೇತಿ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದರು.
ಎಪಿಎಂಸಿಯು ರೈತರ ಪರವಾಗಿ ಕೆಲಸ ಮಾಡುತ್ತಿದೆ. ಸಂಸ್ಥೆಯ ಕಾರ್ಯಚಟುವಟಿಕೆಗಳ ಪೈಕಿ ರೈತ ಅಪಘಾತ ಸಂಜೀವಿನಿ ಯೋಜನೆ ಲಾಭ ಪಡೆಯಬಹುದಾಗಿದೆ ಎಂದು ಹೇಳಿದರು.
ನಿವೃತ್ತ ಹಿರಿಯ ವಿಜ್ಞಾನಿ ವೈ.ಟಿ.ಎನ್.ರೆಡ್ಡಿ ಮಾತನಾಡಿ, ಹವಾಮಾನ ವೈಪರಿತ್ಯದಿಂದಾಗಿ ಮಾವು ಫಸಲು ಕುಂಠಿತವಾಗುವ ಸಾಧ್ಯತೆ. ಎಚ್ಚರಿಕೆ ವಹಿಸುವಂತೆ ರೈತರಿಗೆ ಸಲಹೆ ನೀಡಿದರು.
ತೋಟಗಾರಿಕೆ ಇಲಾಖೆ ಅಧಿಕಾರಿಗಳಾದ ದೊಡ್ಡರಂಗೇಗೌಡ ಮತ್ತು ವೆಂಕಟೇಗೌಡ ರೈತರ ಸಮಸ್ಯೆ ಆಲಿಸಿದರು. ಕನಕಪುರದಲ್ಲಿ ಹಣ್ಣು ಮತ್ತು ತರಕಾರಿ ರೈತರಿಂದ ನಿಲ್ಲಿಸಿರುವ ಹಾಪ್ಕಾಮ್ಸ್ನ ಖರೀದಿಯನ್ನು ಪುನರಾರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.
ಎಪಿಎಂಸಿ ಅಧ್ಯಕ್ಷ ಕುರುಬಳ್ಳಿ ಡಿ.ನಟೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕಿನ ರೈತಾಶಕ್ತ ಗುಂಪಿನ ಎ1, ಎ2 ಪ್ರಮುಖರ ಆಯ್ಕೆ ಹಾಗೂ ಜಿಲ್ಲಾಮಟ್ಟದ 3ಮಂದಿ ನಿರ್ದೇಶಕರ ಆಯ್ಕೆ ಎನ್ಡಿಆರ್ಎಸ್ ಸಂಯೋಜಕ ಗೋವಿಂದರಾಜು ನೇತೃತ್ವದಲ್ಲಿ ನಡೆಯಿತು.
ಎಫ್ಐಜಿಗಳಾಗಿ ತಾಲ್ಲೂಕಿನ 25 ಗುಂಪುಗಳಿಗೆ 50 ಜನರನ್ನು ಆಯ್ಕೆಮಾಡಲಾಯಿತು. ಜಿಲ್ಲಾ ನಿರ್ದೇಶಕರಾಗಿ ಹೊಸದೊಡ್ಡಿ ಕುರಿ ತಮ್ಮಯ್ಯ, ವೆಂಕಟರಾಯನದೊಡ್ಡಿ ಅಶ್ವತ್ಥನಾರಾಯಣ, ಮಹಿಳಾ ನಿರ್ದೇಶಕಿಯಾಗಿ ವಾಡೆದೊಡ್ಡಿ ಶಕುಂತಲ ಆಯ್ಕೆಯಾದರು.