ಕನಕಪುರ: ಮೇಕೆದಾಟುವಿನಲ್ಲಿ ಜಲಾಶಯ ನಿರ್ಮಾಣ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ನ. 22ರಂದು ಕನಕಪುರದಿಂದಪಾದಯಾತ್ರೆ ಪ್ರಾರಂಭಿಸುವುದಾಗಿ ಕರ್ನಾಟಕ ರಾಜ್ಯ ಮೇಕೆದಾಟು ಹೋರಾಟ ಸಮಿತಿಯ ಜಿಲ್ಲಾ ಅಧ್ಯಕ್ಷ ಎಂ.ಡಿ. ಶಿವಕುಮಾರ್ ತಿಳಿಸಿದರು.
ತಾಲ್ಲೂಕಿನ ಹಾರೋಹಳ್ಳಿಯಲ್ಲಿ ಮೇಕೆದಾಟು ಹೋರಾಟ ಸಮಿತಿಯಿಂದ ನಡೆಸುತ್ತಿರುವ ಪಾದಯಾತ್ರೆ ಕುರಿತು ಗುರುವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಅಣೆಕಟ್ಟೆ ನಿರ್ಮಾಣ ಮಾಡುವಂತೆ ಒತ್ತಾಯಿಸಿ ಈ ಹಿಂದೆ ಪಾದಯಾತ್ರೆ ನಡೆಸಿದ ಸಂದರ್ಭದಲ್ಲಿ ಹೋರಾಟಗಾರರ ನೈತಿಕ ಬಲವನ್ನು ಕುಗ್ಗಿಸಲು ಜಿಲ್ಲಾಡಳಿತವು ಕನಕಪುರದಲ್ಲಿ ಪಾದಯಾತ್ರೆ ತಡೆದು ಬಂಧಿಸಿತ್ತು. ಅಲ್ಲಿಗೆ ನಮ್ಮ ಹೋರಾಟ ಮುಗಿದಿಲ್ಲ. ಮುಂದೆ ನಮ್ಮ ಹೋರಾಟವನ್ನು ಮುಂದುವರಿಸಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದಾಗಿ ಹೇಳಿದರು.
ನ. 22ರಿಂದ ಪ್ರಾರಂಭಗೊಳ್ಳುವ ಪಾದಯಾತ್ರೆಯ ರೂಪರೇಷೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಿ ಪಾದಯಾತ್ರೆಯಲ್ಲಿ ಯಾವ ರೀತಿ ತೊಡಗಿಸಿಕೊಳ್ಳಬೇಕು. ಯಾರು ಯಾವ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.
ಹೋರಾಟಕ್ಕೆ ಎಲ್ಲಾ ಸಂಘ, ಸಂಸ್ಥೆಗಳು, ಜನರು ಸಹಕಾರ ನೀಡಬೇಕು ಎಂದು ಕೋರಲಾಯಿತು.
ಮೇಕೆದಾಟು ಹೋರಾಟ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಸಂಪತ್ಕುಮಾರ್, ಪದಾಧಿಕಾರಿಗಳಾದ ದೇವರಾಜು, ಜಗದೀಶ್, ಗಜೇಂದ್ರ ಸಿಂಗ್, ವೆಂಕಟರಮಣಯ್ಯ, ತಾತಯ್ಯ, ರಾಜಣ್ಣ ಇದ್ದರು.