ಕನಕಪುರ: ಇಲ್ಲಿನ ಎಂ.ಜಿ.ರಸ್ತೆಯಲ್ಲಿರುವ ರುಕ್ಮಿಣಿ ಪಾಂಡುರಂಗಸ್ವಾಮಿ ದೇವಾಲಯದಲ್ಲಿ ದ್ವಾದಸಿ ಪ್ರಯುಕ್ತ ತುಳಸಿಯನ್ನು ಪ್ರತಿಷ್ಠಾಪಿಸಿ ತುಳಸಿ ಹಬ್ಬವನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು.
ಭಾವಸಾರ ಕ್ಷತ್ರೀಯ ಸಮಾಜದವರು ಪಾಂಡರಂಗಸ್ವಾಮಿ ದೇವಾಲಯದಲ್ಲಿ ಶುಕ್ರವಾರ ಏಕಾದಶಿಯನ್ನು ಆಚರಣೆ ಮಾಡಿ ಶನಿವಾರ ದ್ವಾದಶಿ ಪ್ರಯುಕ್ತ ರುಕ್ಮಿಣಿ ಪಾಂಡುರಂಗಸ್ವಾಮಿ ಹಾಗೂ ವರದರಾಜಸ್ವಾಮಿಗೆ ವಿಶೇಷ ಅಲಂಕಾರ ಮಾಡಿದರು. ಸಂಜೆ ರುಕ್ಮಿಣಿ ಪಾಂಡುರಂಗಸ್ವಾಮಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟು ಎಂ.ಜಿ.ರಸ್ತೆಯಲ್ಲಿ ಮೆರವಣಿಗೆ ಮಾಡಿದರು.
ನಂತರ ಮಹಿಳಾ ಮಂಡಳಿ ಸದಸ್ಯರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು. ದೇವರಿಗೆ ಮಹಾಮಂಗಳಾರತಿ ನೆರವೇರಿಸಿ ಪ್ರಸಾದ ವಿನಿಯೋಗ ಮಾಡಲಾಯಿತು.
ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ಎಲ್.ಎನ್.ರಾವ್, ಉಪಾಧ್ಯಕ್ಷ ಉಮೇಶ್ಕುಮಾರ್, ಕಾರ್ಯದರ್ಶಿ ರವೀಶ್ಬಾಬು, ಖಜಾಂಚಿ ನಂಜುಂಡರಾವ್, ಪದಾಧಿಕಾರಿಗಳಾದ ಶ್ರೀನಿವಾಸರಾವ್, ಪ್ರಕಾಶ್ ರಾವ್, ರಾಮ್ ರಾವ್, ಸುರೇಶ್ಬಾಬು ಮೊದಲಾದವರು ಉತ್ಸವದಲ್ಲಿ ಪಾಲ್ಗೊಂಡಿದ್ದರು.