ಚನ್ನಪಟ್ಟಣ: ತಾಲ್ಲೂಕಿನ ಸಾದಳ್ಳಿ ಗ್ರಾಮದ ವಿವೇಕ್ ತಮ್ಮ ವಿವಾಹದ ದಿನದಂದು ಶುಭ ಕೋರಲು ಬಂದ ಎಲ್ಲ ಬಂಧು – ಬಳಗ, ಸ್ನೇಹಿತರು, ಅತಿಥಿಗಳಿಗೆ ಒಂದೊಂದು ತೇಗದ ಗಿಡ ವಿತರಣೆ ಮಾಡಿ ‘ವಿಶ್ವ ಪರಿಸರ ದಿನ’ವನ್ನು ವಿಶೇಷವಾಗಿ ಆಚರಿಸಿ ಗಮನ ಸೆಳೆದರು.
ಪಟ್ಟಣದ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದ ವಿವಾಹ ಸಮಾರಂಭದಲ್ಲಿ ವಿವೇಕ್, ಸಹನಾ ಅವರನ್ನು ಬಾಳ ಸಂಗಾತಿಯಾಗಿ ಸ್ವೀಕರಿಸಿದ ವೇಳೆ ಸುಮಾರು ಎರಡು ಸಾವಿರ ತೇಗದ ಗಿಡಗಳನ್ನು ವಿತರಣೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಸಾಮಾನ್ಯವಾಗಿ ಮದುವೆ ಸಂದರ್ಭದಲ್ಲಿ ಫಲ – ತಾಂಬೂಲ ನೀಡುವುದು ವಾಡಿಕೆ. ಪರಿಸರ ರಕ್ಷಣೆ ಉದ್ದೇಶದಿಂದ ಸಸಿಗಳನ್ನು ವಿತರಣೆ ಮಾಡಿದ್ದು, ವಿಶೇಷವಾಗಿತ್ತು.
ಪರಿಸರ ನಾಶದಿಂದಾಗಿ ಹಲವು ರೀತಿಯ ದುಷ್ಪರಿಣಾಮ ಎದುರಾಗುತ್ತಿದೆ. ಇದನ್ನು ತಡೆಗಟ್ಟಲು ಎಲ್ಲೆಡೆ ಗಿಡಗಳನ್ನು ನೆಟ್ಟು ಬೆಳೆಸುವುದು ಅವಶ್ಯ ಎಂದು ವಿವೇಕ್ ಅಭಿಪ್ರಾಯಪಟ್ಟರು.