ರಾಮನಗರ: ಮಾಗಡಿ ತಾಲ್ಲೂಕಿನ ಕೂಡ್ಲೂರು ಕ್ರಾಸ್ ಬಳಿ ಭಾನುವಾರ ಮುಂಜಾನೆ ದನದ ಕೊಟ್ಟಿಗೆಯ ಗೋಡೆಯು ಪಕ್ಕದ ಶೆಡ್ ಮೇಲೆ ಕುಸಿದು ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.
ಫರ್ವೀನ್ (4) ಹಾಗೂ ಇಷಿಕಾ ( 3) ಮೃತರು. ಮೀನಾ ಬಿತ್ತು ( 30) ಹಾಗೂ ಮೋನಿಷಾ ( 35) ಎಂಬುವರು ಗಾಯಗೊಂಡಿದ್ದಾರೆ. ನೇಪಾಳದ ಮೂಲದ ಈ ಕಾರ್ಮಿಕರ ಕುಟುಂಬವು ಸಮೀಪದ ಹೋಟೆಲ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದು, ಶೆಡ್ ನಲ್ಲಿ ವಾಸವಿತ್ತು.
ನಿರಂತರ ಮಳೆಯಿಂದಾಗಿ ಗಂಗರಂಗಮ್ಮ ಎಂಬುವರಿಗೆ ಸೇರಿದ ದನದ ಕೊಟ್ಟಿಗೆಯ ಗೋಡೆಯು ಪಕ್ಕದಲ್ಲೇ ಇದ್ದ ಶೆಡ್ ನ ಮೇಲೆ ಹಠಾತ್ ಕುಸಿಯಿತು. ಇದರಿಂದಾಗಿ ನಿದ್ರೆಯಲ್ಲಿದ್ದ ಮಕ್ಕಳು ಚಿರನಿದ್ರೆಗೆ ಜಾರಿದರು. ಗಾಯಾಳುಗಳಿಗೆ ಮಾಗಡಿ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.