ಚನ್ನಪಟ್ಟಣ: ‘ಮನುಷ್ಯನಿಗೆ ಮೂಲ ಸೌಕರ್ಯಗಳ ಜತೆಗೆ ಆರೋಗ್ಯವೂ ಅವಶ್ಯ’ ಎಂದು ಸಾರ್ವಜನಿಕ ಆಸ್ಪತ್ರೆ ಹಿರಿಯ ಫಾರ್ಮಸಿಸ್ಟ್ ವೇದಮೂರ್ತಿ ಅಭಿಪ್ರಾಯಪಟ್ಟರು.
ತಾಲ್ಲೂಕಿನ ನೀಲಕಂಠನಹಳ್ಳಿ ಗ್ರಾಮದ ಯಜಮಾನ್ ರುದ್ರಯ್ಯ ಸ್ಮಾರಕ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಉಚಿತ ಆಯುಷ್ ವೈದ್ಯಕೀಯ ಶಿಬಿರ ಉದ್ಘಾಟಿಸಿ ಮಾತನಾಡಿದರು.
‘ಮನುಷ್ಯರಿಗೆ ಆಯುರ್ವೇಧ ಔಷಧ, ಹೋಮಿಯೋಪತಿ, ಸಿದ್ಧ ಔಷಧ ಬಹಳ ಉಪಯುಕ್ತ. ಇವುಗಳನ್ನು ಪ್ರತಿಯೊಬ್ಬರೂ ಬಳಸಬಹುದು. ನಿತ್ಯ ವಾಕ್ ಮಾಡಬೇಕು. ಉತ್ತಮ ಆಹಾರ ಸೇವಿಸಬೇಕು. ರೋಗ ಬಾರದಂತೆ ಮುನ್ನೆಚ್ಚರಿಕೆ ವಹಿಸಬೇಕು. ಶಿಬಿರ ಆಯೋಜನೆ ಸ್ವಾಗತಾರ್ಹ ಕೆಲಸ. ಇದರ ಸದುಪಯೋಗ ಎಲ್ಲರು ಪಡೆದುಕೊಳ್ಳಬೇಕು’ ಎಂದರು.
ಅಧ್ಯಕ್ಷತೆ ವಹಿಸಿದ್ದ ರಾಮನಗರ ಜಿಲ್ಲಾ ಆಯುಷ್ ಇಲಾಖೆ ವೈದ್ಯಾಧಿಕಾರಿ ಡಾ.ರಾಜಲಕ್ಷ್ಮಿ ಮಾತನಾಡಿ,‘ಇಲಾಖೆಯಿಂದ ನೀಡುತ್ತಿರುವ ಉಚಿತ ತಪಾಸಣೆ ಹಾಗೂ ಔಷಧ ಎಲ್ಲರೂ ಪಡೆಯಬೇಕು. ಆಯುಷ್ ಔಷಧಿಗಳ ಮಹತ್ವದ ಬಗ್ಗೆ ತಿಳಿಯಬೇಕು. ಎಲ್ಲ ರೀತಿ ರೋಗಗಳಿಗೆ ಇದು ಸಿದ್ಧ ಔಷಧವಾಗಿದೆ. ಪ್ರತಿಯೊಬ್ಬರು ಈ ಉಪಯೋಗ ಪಡೆದುಕೊಳ್ಳಬೇಕು’ ಎಂದರು.
ಧರ್ಮಸ್ಥಳ ಕ್ಷೇಮಾಭಿವೃದ್ಧಿ ಯೋಜನೆ ಅಧಿಕಾರಿ ಸವಿತಾ, ಸೇವಾ ಪ್ರತಿನಿಧಿ ಸೌಮ್ಯ, ಮುಖಂಡ ಶಿವಸ್ವಾಮಿ, ಹಿರಿಯ ಜಾನಪದ ಗಾಯಕ ಚೌ.ಪು.ಸ್ವಾಮಿ, ಡಾ.ಎಂ.ಎನ್.ಗೀತಾ, ಡಾ.ಚಂದ್ರಕಲಾ, ಡಾ.ಚಂದ್ರಶೇಖರ್, ಡಾ.ಪದ್ಮಜ, ಡಾ.ರಂಗಪ್ಪ ಇದ್ದರು.
ಗಾಯಕ ಬಾಣಂತಹಳ್ಳಿ ಪ್ರಕಾಶ್ ಗೀತಗಾಯನ ನಡೆಸಿಕೊಟ್ಟರು. ತಾಲ್ಲೂಕಿನ ಮಸಿಗೌಡನದೊಡ್ಡಿ ನವಚೇತನ ಸಂಘ, ನೀಲಕಂಠನಹಳ್ಳಿ ರೇಣುಕಾಂಬ ಸಂಘ, ಕೃಷ್ಣ ಸಂಘ, ಗುರುಮೂರ್ತಿ ಯಲ್ಲಮ್ಮ ಸಂಘಗಳ ಸದಸ್ಯರು ಇದ್ದರು.