ಮೋಟಗೊಂಡನಹಳ್ಳಿ(ಮಾಗಡಿ): ಏಕತೆ ನಮ್ಮಲ್ಲರ ಹೊಣೆ, ಅದನ್ನು ಸಾಧಿಸುವ ಸಾಧನವೇ ಅಹಿಂಸೆ ಎಂದು ಯೂತ್ ಯುನೈಟೆಡ್ ಫಾರ್ ಗುಡ್ ಆ್ಯಕ್ಷನ್ ಸಂಸ್ಥೆಯ ನಿರ್ದೇಶಕ ಪಿ.ಎನ್.ಕಾರ್ತಿಕ್ ಅಭಿಪ್ರಾಯಪಟ್ಟರು.
ಸ್ವಾಮಿ ವಿವೇಕಾನಂದ ಪ್ರೌಢಶಾಲೆಯಲ್ಲಿ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನದ ಅಂಗವಾಗಿ ಯುಗ ಸಂಸ್ಥೆ ವತಿಯಿಂದ ಬುಧವಾರ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
‘ಇತ್ತೀಚೆಗೆ ಮಕ್ಕಳು ಸಣ್ಣ ವಿಷಯಕ್ಕೂ ಕೋಪಗೊಳ್ಳುತ್ತಿದ್ದಾರೆ. ಅದು ಆರೋಗ್ಯ ಮತ್ತು ಬೆಳವಣಿಗೆಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಗಾಂಧೀಜಿ ಅವರ ಅಹಿಂಸಾವಾದ ಇಂದಿಗೂ ಪ್ರಸ್ತುತವಾಗಿದೆ. ಅದರ ಬಗ್ಗೆ ಬಾಲ್ಯದಿಂದಲೇ ಅರಿವು ಮೂಡಿಸಬೇಕು’ ಎಂದರು.
ಮುಖ್ಯಶಿಕ್ಷಕ ಶಿವಸ್ವಾಮಿ ಮಾತನಾಡಿ, ‘ಸ್ವಾತಂತ್ರ್ಯ ಹೋರಾಟದ ಘಟನೆಗಳನ್ನು ಇತಿಹಾಸ ಪಠ್ಯಪುಸ್ತಕಗಳಲ್ಲಿ ತಿಳಿಸಲಾಗುತ್ತಿದೆ. ಸ್ವಯಂಸೇವಾ ಸಂಸ್ಥೆಗಳು ವಿಶೇಷವಾಗಿ ಮಕ್ಕಳಿಗೆ ನಾಟಕ, ಚಿತ್ರಕಲೆ, ಚರ್ಚಾಸ್ಪರ್ಧೆಗಳ ಮೂಲಕ ಶಾಂತಿದೂತ ಮತ್ತು ಪ್ರಾಮಾಣಿಕತೆಯ ಪ್ರತಿರೂಪ ಶಾಸ್ತ್ರೀಜಿ ಅವರಂತಹ ಮಹನೀಯರ ಜೀವನದ ಮಹತ್ವದ ಬಗ್ಗೆ ಅರಿವು ಮೂಡಿಸಬೇಕು’ ಎಂದರು.
ಯುಗ ಸಂಸ್ಥೆಯ ಕಾರ್ಯಕರ್ತರಾದ ಶ್ರೀಕಾಂತ್, ಹರೀಶ್, ಯತೀಶ್, ರಮ್ಯ, ಅಶ್ವಿನಿ, ವಿನೋದ್ರಾವ್, ದೇವರಾಜ್, ಪ್ರಜ್ವಲ್, ಕಿರಣ್, ನಾಗೇಂದ್ರ, ಅಭಿಷೇಕ, ಪ್ರವೀಣ್ ಮಾತನಾಡಿದರು.