ರಾಮನಗರ : ಇಲ್ಲಿನ ಜಾನಪದ ಲೋಕದಲ್ಲಿ ಕನಕಪುರ ತಾಲ್ಲೂಕಿನ ಬಸವನ ಬನ್ನಿಕುಪ್ಪೆಯ ವೀರಭದ್ರೇಶ್ವರ ಕಲಾ ತಂಡದವರು ಭಾನುವಾರ ವೀರಗಾಸೆ ಕುಣಿತ ಪ್ರದರ್ಶಿಸಿದರು.
‘ಜನಪದ ಕಲೆಗಳನ್ನು ಪ್ರದರ್ಶಿಸುವ ಮೂಲಕ ಉತ್ತಮವಾದ ಜೀವನ ನಡೆಸಬಹುದು. ವೀರಗಾಸೆ ಕುಣಿತದ ಜತೆಗೆ ಪೂಜಾ, ಪಟ ಕುಣಿತವನ್ನ ಪ್ರದರ್ಶಿಸುತ್ತೇನೆ. 6 ವರ್ಷಗಳಿಂದ ಪೂರ್ಣ ಪ್ರಮಾಣದಲ್ಲಿ ಕಲೆಗಳ ಪ್ರದರ್ಶನದಲ್ಲಿಯೆ ತೊಡಗಿಸಿಕೊಂಡಿದ್ದೇನೆ’ ಎಂದು ಕಲಾವಿದ ಸುಮಂತ ತಿಳಿಸಿದರು.
‘ಸರ್ಕಾರದ ಜತೆಗೆ ಸಂಘಸಂಸ್ಥೆಗಳು ಕಾರ್ಯಕ್ರಮಗಳನ್ನು ನೀಡುತ್ತವೆ. ಗ್ರಾಮಗಳಲ್ಲಿ ಊರ ಹಬ್ಬಗಳು ನಡೆದಾಗ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ಸಂದರ್ಭದಲ್ಲಿ ಹೆಚ್ಚಿನ ಕಾರ್ಯಕ್ರಮಗಳು ಸಿಗುತ್ತವೆ. ಕಲಾವಿದರು ಶಿಸ್ತು, ಶ್ರದ್ಧೆಯನ್ನು ರೂಢಿಸಿಕೊಂಡರೆ ಕಲಾವಿದನಾಗಿ ಯಶಸ್ಸು ಗಳಿಸಬಹುದು’ ಎಂದು ತಿಳಿಸಿದರು.
ಕಲಾವಿದ ಪಾರ್ಥಸಾರಥಿ ಮಾತನಾಡಿ, ಜಿಲ್ಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಲಾವಿದರಿದ್ದಾರೆ. ಆದರೆ ಈ ಬಾರಿ ಕಲಾವಿದರಿಗೆ ವಾದ್ಯಪರಿಕರ ಹಾಗೂ ವೇಷಭೂಷಣಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನೀಡಿಲ್ಲ. ಸಂಬಂಧಿಸಿದ ಅಧಿಕಾರಿಗಳು ಈಗಲಾದರೂ ವಾದ್ಯಪರಿಕರ ಹಾಗೂ ವೇಷಭೂಷಣಗಳನ್ನು ಕಲಾವಿದರಿಗೆ ಕೊಡಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.