ರಾಮನಗರ: ಚಾಮುಂಡೇಶ್ವರಿ ಕರಗ ಮಹೋತ್ಸವ ಅಂಗವಾಗಿ ಇದೇ 23ರಂದು ಸಂಜೆ ಜಿಲ್ಲಾ ಕ್ರೀಡಾಂಗಣದಲ್ಲಿ ಖ್ಯಾತ ಹಿನ್ನಲೆ ಗಾಯಕ ವಿಜಯ್ ಪ್ರಕಾಶ್ ತಂಡದಿಂದ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಚಾಮುಂಡೇಶ್ವರಿ ಉತ್ಸವದ ಅಂಗವಾಗಿ ಈ ವರ್ಷವೂ ಅದ್ದೂರಿ ರಸಸಂಜೆ ಕಾರ್ಯಕ್ರಮ ಆಯೋಜಿಸಲಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ, ಶಾಸಕಿ ಅನಿತಾ ಕುಮಾರಸ್ವಾಮಿ, ನಟ ನಿಖಿಲ್ ಕುಮಾರ್ ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.
ಈ ಬಾರಿ ಗಾಯಕ ವಿಜಯ್ ಪ್ರಕಾಶ್ ಅವರೊಟ್ಟಿಗೆ ಅನುರಾಧ ಭಟ್, ಆದ್ಯ ಸೇರಿದಂತೆ ಹಲವು ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಕಲರ್ ಕನ್ನಡ ವಾಹಿನಿ ನೃತ್ಯ ತಂಡ, ಹರಿಪ್ರಿಯ ನೃತ್ಯ ತಂಡವು ಪ್ರದರ್ಶನ ನೀಡಲಿದೆ. ಇದರೊಟ್ಟಿಗೆ ಸ್ಥಳೀಯ ತಂಡಗಳಿಗೂ ಅವಕಾಶ ಮಾಡಿಕೊಡಲಾಗುವುದು ಎಂದರು.
ಅದ್ದೂರಿ ವೇದಿಕೆ: ಹಿಂದೆಂದಿಗಿಂತ ಬೃಹತ್ ಪ್ರಮಾಣದ ವೇದಿಕೆ ನಿರ್ಮಾಣ ಮಾಡಲಾಗುತ್ತಿದೆ. ಕುಮಾರಸ್ವಾಮಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿಯೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ವೇಳೆ ಜೆಡಿಎಸ್ ಮುಖಂಡರಾದ ಉಮೇಶ್, ರೈಡ್ ನಾಗರಾಜು, ಗೂಳಿ ಕುಮಾರ್, ರವಿ, ಜಯಕುಮಾರ್, ವೆಂಕಟೇಶ್ ಇದ್ದರು.