ಕನಕಪುರ: ‘ಸ್ವಾಮಿ ವಿವೇಕಾನಂದರು ಜಗತ್ತಿನ ಶ್ರೇಷ್ಠ ದಾರ್ಶನಿಕ, ದೇಶ ಪ್ರೇಮಿ ಹಾಗೂ ಚಿಂತಕರಾಗಿದ್ದಾರೆ’ ಎಂದು ಜಿಲ್ಲಾ ಲೇಖಕರ ವೇದಿಕೆ ಅಧ್ಯಕ್ಷ ಕೂ.ಗಿ. ಗಿರಿಯಪ್ಪ ಹೇಳಿದರು.
ಇಲ್ಲಿ ರಾಜರಾವ್ ರಸ್ತೆಯ ರೈತ ಸಂಘದ ಕಚೇರಿಯಲ್ಲಿ ಜಿಲ್ಲಾ ಲೇಖಕರ ವೇದಿಕೆಯಿಂದ ಬುಧವಾರ ನಡೆದ ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ವಾಮಿ ವಿವೇಕಾನಂದರು ಬದುಕಿದ್ದು ಕೇವಲ 39 ವರ್ಷಗಳು ಮಾತ್ರ. ಆದರೆ, ಬದುಕಿದಷ್ಟು ದಿನವೂ ತಮ್ಮ ಸಾರ್ಥಕತೆಯನ್ನು ಜಗತ್ತಿಗೆ ಪರಿಚಯಿಸಿಕೊಟ್ಟಿದ್ದಾರೆ. ಅವರ ಚಿಂತನೆಗಳು, ಆಲೋಚನೆಗಳು, ಸಮಾಜದ ಬಗೆಗಿನ ತುಡಿತಗಳು ಎಂದೆಂದಿಗೂ ಅಮರವಾಗಿವೆ ಎಂದರು.
ದೇಶದ ಸಂಸ್ಕೃತಿ, ಸಂಸ್ಕಾರ, ಧರ್ಮ, ಸಾಹಿತ್ಯ, ಸೋದರತ್ವ, ಭ್ರಾತೃತ್ವವನ್ನು ಕಡಲಾಚೆಗಿನ ನಾಡಿಗೆ ಪರಿಚಯಿಸಿದ್ದಾರೆ. ಅಲ್ಲಿಯೂ ನಮ್ಮ ಸಂಸ್ಕೃತಿ ವಿರಾಜಮಾನವಾಗುವಂತೆ ನೋಡಿಕೊಂಡಿರುವ ವೇದಾಂತ ಜ್ಞಾನಿ ಎಂದು ಹೇಳಿದರು.
ಭವ್ಯ ಭಾರತದ ಭವಿಷ್ಯ ಯುವಜನತೆಯ ಮೇಲೆ ನಿಂತಿದೆ ಎಂದ ಅವರು ‘ಯುವಕರಿಗೆ ಏಳಿ ಎದ್ದೇಳಿ, ಜಾಗೃತರಾಗಿರಿ, ಗುರಿ ಮುಟ್ಟುವ ತನಕ ಹಿಂದಿರುಗಬೇಡಿ’ ಎಂಬ ಕರೆಕೊಟ್ಟ ಧಾರ್ಮಿಕ ಚಿಂತಕ ಎಂದು ತಿಳಿಸಿದರು.
ಸಾಹಿತಿ ಚಿಕ್ಕಮರೀಗೌಡ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಮುಖ್ಯಶಿಕ್ಷಕ ಸಿ. ಪುಟ್ಟಸ್ವಾಮಿ, ನಿವೃತ್ತ ಕೃಷಿ ಅಧಿಕಾರಿ ಟಿ.ಎಂ. ರಾಮಯ್ಯ, ಯುವ ಸಾಹಿತಿಗಳಾದ ಸ್ವಾಮಿ, ಅಮೃತವರ್ಷಿಣಿ ಉಪಸ್ಥಿತರಿದ್ದರು. ಶಾಸ್ತ್ರೀಯ ಸಂಗೀತ ಗಾಯಕಿ ವಿಜಯಾಶಂಕರ್ ಗೀತ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.