ಮಾಗಡಿ: ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ ಪ್ರಜಾಪ್ರಭುತ್ವ ಉಳಿಸಲು ಯುವಜನರು ಮುಂದಾಗಬೇಕಾಗಿದೆ ಎಂದು ತಹಶೀಲ್ದಾರ್ ಎನ್.ರಮೇಶ್ ಸಲಹೆ ನೀಡಿದರು.
ಪುರಸಭೆ ಆವರಣದಲ್ಲಿ ನಡೆದ ಮತದಾರರ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು. 18ವರ್ಷ ತುಂಬಿದ ಯುವ ಜನರು ಚುನಾವಣೆ ಶಾಖೆಯಲ್ಲಿ ಸೂಕ್ತ ದಾಖಲೆ ನೀಡಿ ಹೆಸರು ನೋಂದಣಿ ಮಾಡಿಸಿಕೊಳ್ಳಬೇಕು. ಮತದಾನದ ಹಕ್ಕು ದುರಪಯೋಗಪಡಿಸಿಕೊಳ್ಳಬಾರದು. ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವುದು ಪ್ರಜೆಗಳ ಕರ್ತವ್ಯ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದೇಶ್ವರ.ಎಸ್ ಮಾತನಾಡಿ, ಪ್ರಜಾರಾಜ್ಯದ ಆಶಯ ಈಡೇರಬೇಕಾದರೆ ಜನರು ಪ್ರಾಮಾಣಿಕವಾಗಿ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಾ.ನರಸಿಂಹಮೂರ್ತಿ ಮಾತನಾಡಿ, ಸಂವಿಧಾನ ನೀಡಿರುವ ಮತದಾನದ ಹಕ್ಕಿನ ಬಗ್ಗೆ ತಿಳಿದುಕೊಳ್ಳಬೇಕಿದೆ ಎಂದರು.
ಪುರಸಭೆ ಮುಖ್ಯಾಧಿಕಾರಿ ಮಹೇಶ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂಗ್ಲಭಾಷಾ ಪ್ರಾಧ್ಯಾಪಕ ಎಸ್.ಮಂಜುನಾಥ, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಸತೀಶ್, ಶಿಕ್ಷಕ ರಾಜಗೋಪಾಲ್ ಮತದಾನದ ಮಹತ್ವದ ಬಗ್ಗೆ ಮಾತನಾಡಿದರು.
ಕಂದಾಯ ಇಲಾಖೆ ಮತ್ತು ಶಿಕ್ಷಣ ಇಲಾಖೆ ನೌಕರರು ಮತ್ತು ವಿದ್ಯಾರ್ಥಿಗಳು ಇದ್ದರು. ಚುನಾವಣಾ ಶಾಖೆ ಅಧಿಕಾರಿ ಶ್ರೀಧರ್ ಮತದಾರರ ಗುರುತಿನ ಚೀಟಿ ವಿತರಿಸಿದರು. ಗ್ರಾಮ ಲೇಖಪಾಲಕ ವೆಂಕಟೇಶ್, ಪುರಸಭೆ ಆರೋಗ್ಯ ಅಧಿಕಾರಿ ದಿಲೀಪ್ ನದಾಪ್ ಇದ್ದರು.