ರಾಮನಗರ: ಮಾಗಡಿ ತಾಲ್ಲೂಕಿನ ಮರಳುದೇವನಪುರದಲ್ಲಿ ಬುಧವಾರ ಚಿರತೆ ದಾಳಿಯಿಂದ ತಪ್ಪಿಸಿಕೊಳ್ಳಲು ಮರವೇರಿದ ಯುವತಿ ಮೇಲಿಂದ ಬಿದ್ದು ಗಾಯಗೊಂಡಿದ್ದಾಳೆ.
ಮರದಿಂದ ಬಿದ್ದು ವಿಜಯಲಕ್ಷ್ಮಿ(25) ಎಂಬ ಯುವತಿಯ ಸೊಂಟದ ಭಾಗಕ್ಕೆ ತೀವ್ರ ಪೆಟ್ಟಾಗಿದೆ. ಮಾಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಗ್ರಾಮದ ಜಮೀನಿನಲ್ಲಿ ಯುವತಿ ಕುರಿ ಮೇಯಿಸುತ್ತಿದ್ದ ವೇಳೆ ಚಿರತೆ ಅಲ್ಲಿ ಪ್ರತ್ಯಕ್ಷ್ಯವಾಗಿದೆ. ಇದರಿಂದ ಗಾಬರಿಗೊಂಡ ಆಕೆ ಮರವೇರಿದ್ದು, ಕೆಳಗೆ ಬಿದ್ದು ಸೊಂಟದ ಮೂಳೆ ಮುರಿದುಕೊಂಡಿದ್ದಾಳೆ.
ಪಕ್ಕದ ಜಮೀನಿನಲ್ಲಿದ್ದವರು ಕೂಗಿಕೊಂಡ ಕಾರಣ ಚಿರತೆ ಸ್ಥಳದಿಂದ ಓಡಿಹೋಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಯುವತಿಯ ಆರೋಗ್ಯ ವಿಚಾರಿಸಿದರು.