ರಾಮನಗರ: ಇಲ್ಲಿನ ಆದಿಚುಂಚನಗಿರಿ ಶಾಖಾ ಮಠದ ಆವರಣದಲ್ಲಿ ಮೇ 1ರಿಂದ 10ರವರೆಗೆ 22ನೇ ರಾಜ್ಯ ಮಟ್ಟದ ಮಹಿಳಾ ಜನ ಜಾಗೃತಿ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಮಠದ ಅನ್ನದಾನೇಶ್ವರನಾಥ ಸ್ವಾಮೀಜಿ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ರಾಜ್ಯದ ಎಲ್ಲಾ 30 ಜಿಲ್ಲೆಗಳಿಂದ 1500ಕ್ಕೂ ಹೆಚ್ಚಿನ ಮಂದಿ ಪಾಲ್ಗೊಳ್ಳಲಿದ್ದಾರೆ. ಮೇ 2ರಂದು ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಶಿಬಿರವನ್ನು ಉದ್ಘಾಟಿಸಲಿದ್ದಾರೆ’ ಎಂದರು.
‘ಮಹಿಳೆಯರನ್ನು ಸ್ವಾವಲಂಬಿ ಆಗಿಸಿ ಅವರ ವ್ಯಕ್ತಿತ್ವ ನಿರ್ಮಾಣ ಮಾಡುವ ಸಲುವಾಗಿ ಕಳೆದ 22 ವರ್ಷಗಳಿಂದ ಈ ಶಿಬಿರ ಆಯೋಜಿಸುತ್ತಾ ಬರಲಾಗಿದೆ. ಶಿಬಿರಾರ್ಥಿಗಳಿಗೆ ಉಚಿತ ಊಟ, ವಸತಿ ಜೊತೆಗೆ ಲೇಖನ ಸಾಮಗ್ರಿ ಹಾಗೂ ಸಮವಸ್ತ್ರಗಳನ್ನು ಉಚಿತವಾಗಿ ನೀಡಲಾಗುವುದು’ ಎಂದರು.
‘ಸಂಸ್ಕತಿ, ಪರಿಸರ ನೈರ್ಮಲ್ಯ, ದೈನಂದಿನ ವ್ಯಾಯಾಮ, ಆರೋಗ್ಯ ರಕ್ಷಣೆಯ ಅರಿವು, ಸದಾಚಾರ ಕುರಿತು ವಿಷಯ ತಜ್ಞರು ಶಿಬಿರದಲ್ಲಿ ಉಪನ್ಯಾಸ ನೀಡುವರು. ಯೋಗ, ಜೋತಿಷ್ಯ, ರಾಷ್ಟ್ರೀಯ ಭಾವೈಕ್ಯದ ಬಗ್ಗೆಯೂ ಶಿಬಿರವು ಬೆಳಕು ಚೆಲ್ಲಲಿದೆ’ ಎಂದರು.
13 ವರ್ಷ ಮೇಲ್ಪಟ್ಟ ಮಹಿಳೆಯರು ಪಾಲ್ಗೊಳ್ಳಬಹುದು. ಆಸಕ್ತರು ಶಾಖಾ ಮಠದಲ್ಲಿ ಇದೇ 30ರ ಒಳಗೆ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ತಿಳಿಸಿದರು.
ಆದಿ ಚುಂಚನಗಿರಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶಿವರಾಮು ಹಾಜರಿದ್ದರು.