ರಾಮನಗರ: ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಹಾಗೂ ತಾಲ್ಲೂಕು ಘಟಕದ ಸಹಯೋಗದಲ್ಲಿ ಕಾರ್ಮಿಕ ದಿನವನ್ನು ಇಲ್ಲಿನ ಮಿನಿವಿಧಾನ ಸೌಧದ ಆವರಣದಲ್ಲಿ ಬುಧವಾರ ಆಚರಿಸಲಾಯಿತು.
‘ನೌಕರರಿಗೆ ₨18 ಸಾವಿರ ಕನಿಷ್ಠ ವೇತನ ನಿಗದಿಪಡಿಸಬೇಕು. ಪಂಚಾಯಿತಿ ಸಿಬ್ಬಂದಿಗೆ 2018ರ ಮಾರ್ಚ್ನಿಂದ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ಪಂಚತಂತ್ರದಲ್ಲಿ ಸೇರಿಸಿ ಇಎಫ್ಎಂಎಸ್ ಆಗಿರುವವರಿಗೆ ಸರ್ಕಾರದ ನೇರ ನಿಧಿಯಿಂದ, ಇಎಫ್ಎಂಎಸ್ ಆಗದ ಸಿಬ್ಬಂದಿಗೆ ಗ್ರಾಮ ಪಂಚಾಯಿತಿಗಳು ತನ್ನ ಸ್ವಂತ ಸಂಪನ್ಮೂಲದಿಂದ ಕಾರ್ಮಿಕ ಇಲಾಖೆ ನಿಗದಿಪಡಿಸುವ ವೇತನ ಮತ್ತು ಪಿಡಿಎ ಯನ್ನು ಕಡ್ಡಾಯವಾಗಿ ಪಾವತಿಸುವಂತೆ ಸರ್ಕಾರ ಆದೇಶಿಸಿದೆ. ಈ ಆದೇಶವನ್ನು ಪಾಲಿಸಬೇಕು’ ಎಂದು ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ರಾಜಣ್ಣ ಒತ್ತಾಯಿಸಿದರು.
‘ಇಎಫ್ಎಂಎಸ್ ಗೆ ಸೇರ್ಪಡೆಯಾಗದೆ ಉಳಿದಿರುವ ಸಿಬ್ಬಂದಿಯನ್ನು ಕೂಡಲೇ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಪಂಚತಂತ್ರದಲ್ಲಿ ಸೇರಿಸಬೇಕು. ನಿವೃತ್ತಿಯಾದವರಿಗೆ ಒಂದು ವರ್ಷದ ಸೇವೆಗೆ 15 ದಿನದಂತೆ ಅವರ ಸೇವೆಗೆ ಅನುಗುಣವಾಗಿ 15 ತಿಂಗಳು ಮೀರದಂತೆ ಉಪಧನ ನೀಡಬೇಕೆಂಬ ಆದೇಶವಿದ್ದರೂ ನಿವೃತ್ತಿಯಾದವರಿಗೆ ಉಪಧನ ನೀಡುತ್ತಿಲ್ಲ. ಕೂಡಲೆ ನಿವೃತ್ತಿಯಾದ ಸಿಬ್ಬಂದಿಗೆ ಉಪಧನ ನೀಡಬೇಕು’ ಎಂದು ತಿಳಿಸಿದರು.
ಜಿಲ್ಲಾ ಘಟಕದ ಕಾರ್ಯದರ್ಶಿ ಪ್ರದೀಪ್ ಮಾತನಾಡಿ ಸೇವಾ ಪುಸ್ತಕವನ್ನು ತೆರೆಯಬೇಕು. ಜಿಲ್ಲಾ ಪಂಚಾಯಿತಿವತಿಯಿಂದ ಅನುಮೋದನೆಯಾಗದಿರುವ ಎಲ್ಲಾ ನೌಕರರನ್ನು ಅನುಮೋದನೆ ಮಾಡಬೇಕು. ಸೇವಾ ನಿಯಮಾವಳಿ, ಪಿಂಚಣಿ, ವೈದ್ಯಕೀಯ ವೆಚ್ಚ, ಕಂಪ್ಯೂಟರ್ ಆಪರೇಟರ್ ಗಳ ಬಡ್ತಿಗೆ ಸೇರಿಸಬೇಕು. ಗ್ರಾಮ ಪಂಚಾಯಿತಿ ನೌಕರರನ್ನು ಕಾರ್ಯದರ್ಶಿ ಗ್ರೇಡ್ ಗೆ ಮುಂಬಡ್ತಿ ನೀಡಬೇಕು ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ನೌಕರರ ಸಂಘದ ಪದಾಧಿಕಾರಿಗಳಾದ ಎಂ. ನಾಗಮ್ಮ, ಜಯಣ್ಣ, ರೇಣುಕಯ್ಯ, ರಾಜಶೇಖರ, ರೇಣುಕಯ್ಯ, ಶ್ರೀನಿವಾಸ್ ಇದ್ದರು.