ರಾಮನಗರ: ಜನರ ಆರ್ಥಿಕ ದುಃಸ್ಥಿತಿಯೇ ಜೀತ ಪದ್ಧತಿಗೆ ಮೂಲ ಕಾರಣ. ಜನರು ಇನ್ನಾದರೂ ಸಾಲದ ಶೂಲಕ್ಕೆ ಸಿಲುಕದಂತೆ ಎಚ್ಚರ ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮುಲ್ಲೈ ಮುಹಿಲನ್ ಹೇಳಿದರು.
ಜಾನಪದ ಲೋಕದ ಸಭಾಂಗಣದಲ್ಲಿ ಮಂಗಳವಾರ ಇಂಟರ್ನ್ಯಾಷನಲ್ ಜಸ್ಟೀಸ್ಮಿಷನ್ ವತಿಯಿಂದ ಹಮ್ಮಿಕೊಂಡಿದ್ದ ಜೀತಕಾರ್ಮಿಕ ಪದ್ಧತಿ ಹಾಗೂ ಮಾನವ ಕಳ್ಳಸಾಗಣೆ ಕುರಿತ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂದು ಜೀತದಾಳುಗಳ ಬಗೆಗಿನ ಪರಿಕಲ್ಪನೆಯು ಬದಲಾಗಿದೆ. ಜನರು ಪಡೆದ ಸಾಲಕ್ಕಾಗಿ ಒತ್ತೆಯಾಳುಗಳಾಗಿ ದುಡಿಯುತ್ತಿದ್ದಾರೆ. ಅಸಂಘಟಿತ ವಲಯದ ಕಾರ್ಮಿಕರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಮೀಟರ್ ಬಡ್ಡಿ ದಂಧೆಗೆ ಬಲಿಯಾಗಬಾರದು. ಸ್ವಸಹಾಯ ಗುಂಪುಗಳನ್ನು ರಚಿಸಿಕೊಂಡು ವ್ಯವಸ್ಥಿತ ರೀತಿಯಲ್ಲಿ ಆರ್ಥಿಕ ನೆರವು ಪಡೆದು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
‘ರಾಜಧಾನಿಗೆ ಹತ್ತಿರವೇ ಇರುವ ರಾಮನಗರದಲ್ಲಿ ಇನ್ನೂ ಜೀತ ಪದ್ಧತಿ ಇದೆ ಎನ್ನುವುದನ್ನು ನಾನು ನಂಬಿರಲಿಲ್ಲ. ಆದರೆ ಒಂದೊಂದೇ ಪ್ರಕರಣಗಳು ಬೆಳಕಿಗೆ ಬರುತ್ತಲೇ ಸಂತ್ರಸ್ಥರ ಮಾತು ಕೇಳಿ ವಾಸ್ತವದ ಅರಿವಾಯಿತು’ ಎಂದರು.
ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶಂಕರಪ್ಪ ಮಾತನಾಡಿ ‘ಸರ್ಕಾರದ ವಿವಿಧ ಯೋಜನೆಗಳು ಮತ್ತು ಮಾಧ್ಯಮಗಳ ವರದಿಗಾರಿಕಯಿಂದಾಗಿ ಇಂದು ಜೀತ ಪದ್ಧತಿ ಸಾಕಷ್ಟು ನಿಯಂತ್ರಣಕ್ಕೆ ಬಂದಿದೆ. ಸರ್ಕಾರವು ಅಸಂಘಟಿತ ಕಾರ್ಮಿಕರಿಗಾಗಿ ಉದ್ಯೋಗ ಖಾತ್ರಿ ಯೋಜನೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ಜನರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಕೋರಿದರು.
ಕೂಲಿ ಮಾಡುತ್ತಲೇ ಗರ್ಭಪಾತ: ರಾಮನಗರ ಜಿಲ್ಲೆಯವರೇ ಆದ ಪಾಪಮ್ಮ, ತಾನು ಹಾರೋಹಳ್ಳಿಯ ಇಟ್ಟಿಗೆ ಕಾರ್ಖಾನೆಯಲ್ಲಿ ಜೀತದಾಳಾಗಿ ಪಟ್ಟ ಸಂಕಟವನ್ನು ಮಾಧ್ಯಮದವರ ಮುಂದೆ ತೆರೆದಿಟ್ಟರು.
‘ಅಣ್ಣ ಮದುವೆ ಸಾಲ ತೀರಿಸಲು ಇಟ್ಟಿಗೆ ಕಾರ್ಖಾನೆ ಸೇರಿದ್ದು, ನಾನೂ ಅಲ್ಲಿ ಕಾರ್ಮಿಕಳಾಗಿ ಹೋದೆ. ನಮ್ಮ ಸಂಬಂಧಿಕರೇ ಆರು ಕುಟಂಬಗಳಿದ್ದೆವು. ವಾರಕ್ಕೆ ಖರ್ಚಿಗೆ ₹500 ನೀಡುತ್ತಿದ್ದರು. ಇಟ್ಟಿಗೆ ಕುಯ್ಯುವುದಕ್ಕೆ ಸರಿಯಾದ ಕೂಲಿ ನೀಡದೇ, ಹೊರಗೆ ಹೋಗಲು ಬಿಡದೇ ಶೋಷಣೆ ಮಾಡಿದರು’ ಎಂದು ಕಣ್ಣೀರಿಟ್ಟರು.
‘ನನ್ನನ್ನು ಹೊರಗೆ ಮದುವೆ ಮಾಡಲು ಬಿಡದೇ ಕಾರ್ಖಾನೆಯಲ್ಲಿ ಇದ್ದವರ ಜೊತೆಯೇ ವಿವಾಹ ಮಾಡಿಸಿದರು. ಅದಕ್ಕೆ ಮಾಡಿದ ಖರ್ಚನ್ನೂ ಸಾಲಕ್ಕೆ ಬರೆದುಕೊಂಡರು. ಬೆಳಿಗ್ಗೆಯಿಂದ ರಾತ್ರಿವರೆಗೂ ದುಡಿಯಬೇಕಾಗಿತ್ತು. ಆಸ್ಪತ್ರೆಗೆ ತೋರಿಸಲು ಆಗಲಿಲ್ಲ. ಆರನೇ ತಿಂಗಳಲ್ಲಿ ಗರ್ಭಪಾತವೂ ಆಯಿತು. ನಂತರದಲ್ಲಿ ಒಂದು ದಿನ ಅಧಿಕಾರಿಗಳು ದಾಳಿ ಮಾಡಿ ನಮ್ಮನ್ನು ಬಂಧಮುಕ್ತಗೊಳಿಸಿದರು’ ಎಂದು ನೆನೆದರು.
ಸರ್ಕಾರದಿಂದ ₹20 ಸಾವಿರ ಪರಿಹಾರ ಧನ ಇನ್ನಷ್ಟೇ ಸಿಗಬೇಕಿದೆ. ನನ್ನಂತೆಯೇ ಇನ್ನೂ ಸಾಕಷ್ಟು ಕಾರ್ಮಿಕರು ಸಂಕಷ್ಟದಲ್ಲಿ ಇದ್ದಾರೆ, ಅವರನ್ನೂ ಪಾರು ಮಾಡಬೇಕು ಎಂದು ಕೋರಿದರು.
ಐಜೆಎಂನ ಸಹಾಯಕ ನಿರ್ದೇಶಕಿ ಪ್ರತಿಮಾ ಜೀತ ಪದ್ಧತಿಯ ಸ್ವರೂಪ ಮತ್ತು ಕಾನೂನುಗಳ ಕುರಿತು ಮಾಹಿತಿ ನೀಡಿದರು. ಐಜೆಎಂನ ಇಗ್ನೇಷಿಯಸ್ ಜೋಸೆಫ್, ಗಾಯತ್ರಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.