ಮಾಗಡಿ: ದುಷ್ಟಶಕ್ತಿಯ ನಿಗ್ರಹಕ್ಕಾಗಿ ಶಿಷ್ಟಶಕ್ತಿಗಳು ಒಂದುಗೂಡಲೇ ಬೇಕು ಎಂದು ಹಗಲುವೇಷದ ಹಿರಿಯ ಕಲಾವಿದ ಶಿರಗುಪ್ಪ ರಾಜಶೇಖರನ್ ತಿಳಿಸಿದರು.
ಕನ್ನಡ ಸಹೃದಯ ಬಳಗದ ವತಿಯಿಂದ ಕಲ್ಯಾಬಾಗಿಲು ಬಳಿ ದಸರಾಮಹೋತ್ಸವದ ಅಂಗವಾಗಿ ನಡೆದ ‘ರಾಮಾಯಣ ಬೀದಿ ನಾಟಕ’ದಲ್ಲಿ ಅವರು ಮಾತನಾಡಿದರು.
ಪರಶಿವನ ಭಕ್ತನಾದರೂ ಅಹಂಕಾರ ಮತ್ತು ದುಷ್ಟಬುದ್ಧಿಯಿಂದ ರಾವಣ, ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನಿಂದ ಹತನಾಗಿ ಸ್ವರ್ಣಲಂಕೆಯ ವೈಭವವನ್ನು ಕಳೆದಕೊಳ್ಳಬೇಕಾಯಿತು ಎಂಬುದನ್ನು ಮರೆಯಬಾರದು ಎಂದರು.
ಶ್ರೀರಾಮನ ಪಾತ್ರಧಾರಿ ಹಗರಿಬೊಮ್ಮನ ಹಳ್ಳಿ ಗುರುಮೂರ್ತಿ ಮಾತನಾಡಿ, ‘ಆಧುನಿಕ ಯುಜನತೆಗೆ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತದ ಕಥಾ ಪ್ರಸಂಗವನ್ನು ತಿಳಿಸದೆ ಇದ್ದುದರಿಂದ ದೇಶದಲ್ಲಿ ಅವ್ಯವಹಾರಗಳನ್ನು ಕಾಣುತ್ತಿದ್ದೇವೆ’ ಎಂದರು.
ಲಕ್ಷ್ಮಣನ ಪಾತ್ರಧಾರಿ ಬಳ್ಳಾರಿ ರಾಮರಾಜು ಮಾತನಾಡಿ, ಪಿತೃವಾಕ್ಯ ಪರಿಪಾಲನೆಗಾಗಿ ಅರಮನೆಯ ಸುಖಭೋಗವನ್ನು ತ್ಯಜಿಸಿದ ರಘುರಾಮಚಂದ್ರನ ಆದರ್ಶ ಗುಣಗಳನ್ನು ಮಕ್ಕಳಿಗೆ ಬಾಲ್ಯದಲ್ಲಿಯೇ ಕಲಿಸಿಕೊಡಬೇಕು ಎಂದರು.
ರಾಮಾಯಣದ ಮುಖ್ಯಭಾಗಗಳನ್ನು ಅಭಿನಯದ ಮೂಲಕ ಪ್ರದರ್ಶಿಸಿದ ಹಗಲುವೇಷದ ಕಲಾವಿದರು ನೋಡುಗರ ಮನಗೆದ್ದರು. ಸಹೃದಯ ಬಳಕದ ಅಧ್ಯಕ್ಷ ಡಾ.ಮುನಿರಾಜಪ್ಪ, ಖಜಾಂಚಿ ಶಿವಲಿಂಗಯ್ಯ ಇದ್ದರು.