ಶಿವಮೊಗ್ಗ: ವ್ಯಕ್ತಿಗತ ಕನಸುಗಳನ್ನು ಸಮುದಾಯದ ಕನಸುಗಳಾಗಿ ಪರಿವರ್ತಿಸುವ ಕಲೆಯೇ ನಾಟಕ ಎಂದು ರಂಗ ವಿಮರ್ಶಕ ಹಾಗೂ ಸಮಾಜವಾದಿ ಚಿಂತಕ ಡಿ.ಎಸ್.ನಾಗಭೂಷಣ್ ಬಣ್ಣಿಸಿದರು.
ಸುವರ್ಣ ಸಂಸ್ಕೃತಿ ಭವನದಲ್ಲಿ ರಂಗಾಯಣದ ರೆಪರ್ಟರಿ ರಂಗತೇರಿಗೆ ಶುಕ್ರವಾರಚಾಲನೆ ನೀಡಿ ಅವರು ಮಾತನಾಡಿದರು.
ಕಲಾವಿದರು ತಮ್ಮ ಮಿತಿಗಳನ್ನು ಮೀರಿ ಸಮಾಜದ ಜತೆ ಬೆರೆಯಬೇಕು. ಹಾಗೆ ಬೆರೆತಾಗ ನಟನೆ ಅರ್ಥಪೂರ್ಣವಾಗಿ ಜನರ ಹೃದಯ ತಲುಪಲು ಸಾಧ್ಯವಾಗುತ್ತದೆ.ಸಮಾಜಕ್ಕೆ ತಿಳಿವಳಿಕೆ ಮೂಡಿಸುವ ಶಕ್ತಿ ಕಲೆ ಸಾಹಿತ್ಯಕ್ಕೆ ಇದೆ. ಅಂಥ ಶಕ್ತಿಯನ್ನು ಸಮಾಜ ಎಷ್ಟರಮಟ್ಟಿಗೆ ಸದುಪಯೋಗಪಡಿಸಿಕೊಂಡಿದೆ ಎಂಬ ಅರಿವಿಲ್ಲ. ಭೀಕರ ವಾಸ್ತವಗಳಿಂದ ತಪ್ಪಿಸಿಕೊಳ್ಳುವ ಮನುಷ್ಯ ಪ್ರಯತ್ನದ ಕಾರಣಗಳಿಂದಲೇ ಕಲೆ, ಸಾಹಿತ್ಯಕ್ಕೆ ವಿಶೇಷ ಪ್ರಾಮುಖ್ಯತೆ ದೊರೆತಿದೆ. ಈ ಸಂಗತಿ ಸರಿಯಾಗಿ ಅರ್ಥ ಮಾಡಿಕೊಂಡರೆ ಬದಲಾವಣೆಯ ಕ್ರಾಂತಿ ಮನದಲ್ಲಿ ಹೆಮ್ಮರವಾಗುತ್ತದೆ. ಭವಿಷ್ಯದಲ್ಲಿ ಉತ್ತಮ ಫಲಕೊಡುತ್ತದೆ ಎಂದು ಅಭಿಪ್ರಾಯಪಟ್ಟರು.
ನಾಟಕ ಪ್ರದರ್ಶನಕ್ಕೆ ತೆರಳುವ ಕಲಾವಿದರು ಎಲ್ಲಾ ಸ್ಥಳಗಳ ಜನರ ಹಾವ–ಭಾವ, ಅಲ್ಲಿನ ಆಚರಣೆ, ಭಾಷೆ, ಬದುಕು ಇತರೆ ವಿಷಯ ಕಲಿಯಬೇಕು. ನಾಟಕ ಪ್ರದರ್ಶಿಸುವ ಊರುಗಳನ್ನು ತಮ್ಮ ದೇ ಊರು ಎಂದು ಭಾವಿಸಬೇಕು. ಆಗ ಒಬ್ಬ ಕಲಾವಿದ ಪರಿಪೂರ್ಣನಾಗಲು ಸಾಧ್ಯ ಎಂದರು.
ರಾಜ್ಯದ ವಿವಿಧ ಭಾಗಗಳ ರಂಗಾಯಣಗಳು ಶಿವಮೊಗ್ಗ ರಂಗಾಯಣದಷ್ಟು ಕ್ರಿಯಾಶೀಲವಾಗಿ ರಂಗ ಪಯಣದದಲ್ಲಿ ತೊಡಗಿಸಿಕೊಂಡಿಲ್ಲ. ಇದು ನಿರ್ದೇಶಕ ಎಂ. ಗಣೇಶ್, ಆಡಳಿತಾಧಿಕಾರಿ ಶಫಿ ಸಾದುದ್ದೀನ್ ಹಾಗೂ ರಂಗ ವಿದ್ಯಾರ್ಥಿಗಳ ಶ್ರಮದ ಫಲ ಎಂದು ಶ್ಲಾಘಿಸಿದರು.
ರಂಗಾಯಣ ನಿರ್ದೇಶಕ ಡಾ.ಎಂ ಗಣೇಶ್ ಮಾತನಾಡಿ, ರಂಗತೇರು ರಾಜ್ಯದಾದ್ಯಂತ 7 ಸಾವಿರ ಕಿ.ಮೀ. ಕ್ರಮಿಸಲಿದೆ. ‘ಗೌರ್ನಮೆಂಟ್ ಬ್ರಾಹ್ಮಣ’ ‘ಇದಕ್ಕೆ ಕೊನೆ ಎಂದು..?’ ‘ಮೆರವಣಿಗೆ’ ‘ಟ್ರಾನ್ಸ್ನೇಷನ್’ ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದು ವಿವರ ನೀಡಿದರು.