ಮುಂಡರಗಿ: ಹಿಂದೂ ಸಂಪ್ರದಾಯ ಮತ್ತು ಧಾರ್ಮಿಕ ಆಚರಣೆಗಳ ಪ್ರಕಾರ ಪ್ರತಿ 12 ವರ್ಷಗಳಿಗೊಮ್ಮೆ ದೇಶದ ಒಂದೊಂದು ನದಿಗೆ ಪುಷ್ಕರ ಪುಣ್ಯಸ್ನಾನ ಯೋಗ ಬರುತ್ತದೆ. ಈ ವರ್ಷ ತುಂಗಭದ್ರಾ ನದಿಗೆ ಪುಷ್ಕರ ಪುಣ್ಯಸ್ನಾನ ಯೋಗ ಬಂದಿದೆ.
ಕಳೆದ ಡಿಸೆಂಬರ್ 1ರಿಂದ ಪುಷ್ಕರ ಪುಣ್ಯಸ್ನಾನ ಪ್ರಾರಂಭವಾ ಗಿದ್ದು, ಒಂದು ವರ್ಷಗಳ ಕಾಲ ಅದು ಮುಂದುವರಿಯಲಿದೆ. ಹೀಗಾಗಿ ಸಂತರು, ಶರಣರು ಸೇರಿದಂತೆ ಸಾವಿರಾರು ಜನರು ತುಂಗಭದ್ರಾ ನದಿಯಲ್ಲಿ ಪುಷ್ಕರ ಪುಣ್ಯ ಸ್ನಾನ ಮಾಡುತ್ತಿದ್ದಾರೆ.
ತಾಲ್ಲೂಕಿನ ಶಿಂಗಟಾಲೂರು ವೀರಭದ್ರೇಶ್ವರ, ಕೊರ್ಲಹಳ್ಳಿ ಬಳಿಯ ಮದಲಗಟ್ಟಿ ಆಂಜನೇಯ, ಗುಮ್ಮಗೋಳ ಗೋಣಿಬಸವೇಶ್ವರ, ವಿಠಲಾಪುರ ಗ್ರಾಮದ ರಸಲಿಂಗ, ಬಿದರಳ್ಳಿಯ ಬಿದರಳ್ಳೆಮ್ಮನ ದೇವಸ್ಥಾನ ಮೊದಲಾದ ಪುಣ್ಯಕ್ಷೇತ್ರಗಳ ಮುಂದೆ ತುಂಗಭದ್ರಾ ನದಿ ಹರಿಯುತ್ತಿದೆ.
ಹೀಗಾಗಿ ಜ.14ರ ಸಂಕ್ರಾಂತಿಯಂದು ಹಿಂದಿನ ವರ್ಷಗಳಿಗಿಂತಲೂ ಹೆಚ್ಚು ಭಕ್ತರು ತುಂಗಭದ್ರಾ ನದಿ ದಂಡೆಯ ಮೇಲಿರುವ ಪುಣ್ಯಕ್ಷೇತ್ರಗಳಲ್ಲಿ ಪುಷ್ಕರ ಪುಣ್ಯಸ್ನಾನ ಮಾಡುವ ನಿರೀಕ್ಷೆ ಇದೆ.
ಕಳೆದ ವರ್ಷ ಸುರಿದ ಭಾರಿ ಮಳೆಯಿಂದಾಗಿ ತುಂಗಭದ್ರಾ ನದಿಗೆ ಸಾಕಷ್ಟು ಪ್ರಮಾಣದ ನೀರು ಹರಿದು ಬಂದಿದೆ. ಹೀಗಾಗಿ ಈ ವರ್ಷ ಎರಡು ಬಾರಿ ಬ್ಯಾರೇಜು ಭರ್ತಿಯಾಗಿದೆ.