ಮಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ಕರಾವಳಿ ಪ್ರವಾಸ ತುಸು ವಿಳಂಬವಾಗಲಿದೆ. ಮಾರ್ಚ್ ಕೊನೆಯ ವಾರದ ವೇಳೆಗೆ ಅವರು ಕರಾವಳಿಯ ಮೂರು ಜಿಲ್ಲೆಗಳಿಗೆ ಬರುವ ಸಾಧ್ಯತೆ ಇದೆ.
ವಿಧಾನಸಭಾ ಚುನಾವಣೆಯಲ್ಲಿ ಈ ಭಾಗದಲ್ಲಿ ಮೇಲುಗೈ ಸಾಧಿಸುವ ಉದ್ದೇಶದಿಂದ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಲವು ಬಾರಿ ಇಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಈಗಾಗಲೇ ಕೆಲವು ಬಾರಿ ಬಂದು ಹೋಗಿದ್ದಾರೆ. ಅದಕ್ಕೆ ಪ್ರತಿಯಾಗಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಜನಾಶೀರ್ವಾದ ಯಾತ್ರೆ ನಡೆಸಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ.
ಮಾರ್ಚ್ 7 ಅಥವಾ 15ರಿಂದ ರಾಹುಲ್ ಪ್ರವಾಸ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿತ್ತು. ಆದರೆ, ಮಾರ್ಚ್ 18ರಿಂದ 19ರವರೆಗೆ ನವದೆಹಲಿಯಲ್ಲಿ ಎಐಸಿಸಿ ಸರ್ವಸದಸ್ಯರ ಸಭೆ ನಡೆಯಲಿದೆ. ಈ ಕಾರಣದಿಂದ ಪ್ರವಾಸ ಮುಂದೂಡಲು ನಿರ್ಧರಿಸಲಾಗಿದೆ.
‘ರಾಹುಲ್ ಗಾಂಧಿಯವರು ಎಐಸಿಸಿ ಅಧ್ಯಕ್ಷರಾದ ಬಳಿಕ ನಡೆಯುತ್ತಿರುವ ಮೊದಲ ಸರ್ವಸದಸ್ಯರ ಸಭೆ ಇದು. ಈ ಕಾರಣದಿಂದ ಮಾ.20ರವರೆಗೂ ಅವರಿಗೆ ಬರಲು ಸಾಧ್ಯವಾಗುತ್ತಿಲ್ಲ. ಪ್ರವಾಸ ವೇಳಾಪಟ್ಟಿ ಇನ್ನೂ ಅಂತಿಮಗೊಂಡಿಲ್ಲ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಹರೀಶ್ಕುಮಾರ್ ‘ತಿಳಿಸಿದರು.
ಮಾರ್ಚ್ 10ರ ವೇಳೆಗೆ ವೇಳಾಪಟ್ಟಿ ಅಂತಿಮಗೊಳ್ಳುವ ಸಾಧ್ಯತೆ ಇದೆ.