ಶಿವಮೊಗ್ಗ:ಗಾಂಧಿ ಉದ್ಯಾನದಲ್ಲಿ ತೋಟಗಾರಿಕಾ ಇಲಾಖೆ ಗಣರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಿರುವ ಫಲ, ಫುಷ್ಪ ಪ್ರದರ್ಶನ ನಾಗರಿಕರ ಕಣ್ಮನ ಸೆಳೆಯುತ್ತಿದೆ.
ವಿವಿಧ ಹೂಗಳಿಂದ ಅಲಂಕೃತಗೊಂಡ ಬಸವಣ್ಣನವರ ಪುತ್ಥಳಿ, ಇಡೀ ಶರಣತತ್ವವೇ ಅನಾವರಣಗೊಂಡಂತೆ ಭಾಸವಾಗುತ್ತಿದೆ.
ಹೂವಿನ 7 ಎಡೆಯ ಸರ್ಪ, ಬಾತುಕೋಳಿ, ಐಸ್ ಕ್ರೀಂ, ಬೊಂಬೆ, ಕಾಳಿಂಗ ಮರ್ದನ, ಮಹಿಳಾ ಸಬಲೀಕರಣ ರಂಗೋಲಿ ಚಿತ್ರಗಳು, ಹೆಣ್ಣು ಮಕ್ಕಳಿಗೆ ಪ್ರಾಮುಖ್ಯತೆ ನೀಡುವ ಸಂಕೇತದ ಹೂವಿನ ಆಕೃತಿಗಳು ಗಮನಸೆಳೆಯುತ್ತಿವೆ. ವಿವಿಧ ರೀತಿಯ ಹೂವಿನ ಆಕೃತಿಯ ಫೋಟೋ ಫ್ರೇಮ್ ಗಳು ಆವರಣದ ತುಂಬ ಕೈಬೀಸಿ ಕರೆಯುತ್ತಿವೆ.
ಬೇಟಿ ಬಚಾವೊ - ಬೇಟಿ ಪಡಾವೊ, ತೋಟಗಾರಿಕಾ ಪಿತಾಮಹಾ ಮರಿಗೌಡ ಅವರ ಪುತ್ಥಳಿ, ಅಣಬೆ ವನ, ಸೇರಿದಂತೆ ಹೂವಿನಿಂದ ತಯಾರಿಸಲ್ಪಟ್ಟ ಇತರೆ ಕಲಾಕೃತಿಗಳು,ನೇಗಿಲು ಹಿಡಿದು ನಿಂತಿರು ರೈತ ಹಾಗೂ ಮಿಸ್ಟರ್ ಭೀಮ್ ಸೇರಿದಂತೆ ಹಲವು ಆಕರ್ಷಣೆಯ ಕಲಾಕೃತಿಗಳು ಮನಸೂರೆಗೊಳ್ಳುತ್ತಿವೆ.
ಅಂಬೇಡ್ಕರ್ ಭವನದ ಆವರಣದಲ್ಲಿ ಮಾರಾಟ ಮಳಿಗೆಗಳನ್ನುತೆರೆಯಲಾಗಿದೆ.ಜ.27ರವರೆಗೆ ಈ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಸಂಜೆ 6ರಿಂದ 8.30ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಗಮನಸೆಳೆದ ತರಕಾರಿ-ಹಣ್ಣುಗಳು:
ಚೈನೀಸ್ ಕ್ಯಾಬೇಜ್, ರೆಡ್ ಲಿಟೈಸ್, ಬ್ರೋಕೋಲಿ, ಅತ್ಯುರೀಯಂ, ಲೀಕ್ ಇತ್ಯಾದಿ ತರಕಾರಿ, ಸೊಪ್ಪುಗಳು , ಅಮೆರಿಕನ್ ಪಿಯರ್, ವಾಟರ್ ಆಯಪಲ್, ಇರಾನ್ ಮಸ್ಕಮಲನ್, ಫ್ಯಾಷನ್ ಫ್ರೂಟ್ ಮತ್ತಿತರ ತರಕಾರಿ, ಸೊಪ್ಪು, ಹಣ್ಣುಗಳ ಪ್ರದರ್ಶನ ಗಮನಸೆಳೆದವು.
‘ಮಧು ಪ್ರಪಂಚ’ ಶೀರ್ಷಿಕೆ ಅಡಿ ಜೇನು ಸಾಕಾಣಿಕೆ ಬಗ್ಗೆ ಮಾಹಿತಿ, ವಿವಿಧ ರೀತಿಯ ಜೇನುತುಪ್ಪಗಳ ಮಾರಾಟ, ವಿಶಿಷ್ಟ ತಳಿಯ ಬಾಳೆಗೊನೆ, ಹಲ್ವಾ, ಹಪ್ಪಳ, ಪೈನಾಪಲ್, ಕಲ್ಲಂಗಡಿಗಳು ಕಂಡುಬಂದವು. ಮೀನುಗಾರಿಕೆ ಇಲಾಖೆ ಅಡಿ ಆಕ್ವೇರಿಯಂ ಪ್ರದರ್ಶನ ಆಯೋಜಿಸಲಾಗಿತ್ತು.
ನಾಗರಿಕರ ಸೆಲ್ಫೀ: ಉದ್ಘಾಟನೆ ದಿನ ಶುಕ್ರವಾರ ಸಾರ್ವಜನಿಕರು ಪುಷ್ಪ ಪ್ರದರ್ಶನಗಳ ಎದುರು ನಿಂತುಕೊಂಡು ಮೊಬೈಲ್ ನಲ್ಲಿ ಛಾಯಾಚಿತ್ರ ತೆಗೆದುಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.