ಶಿವಮೊಗ್ಗ: ರೈಲ್ವೆ ಹಳಿ ಮೇಲೆ ಓಡಾಡುತ್ತಿದ್ದ ಎಮ್ಮೆಗಳ ಪ್ರಾಣ ಉಳಿಸಲು, ರೈಲನ್ನೇ ನಿಲ್ಲಿಸಿ ಲೋಕೋ ಪೈಲಟ್ (ರೈಲ್ವೆ ಚಾಲಕ) ಮಾನವೀಯತೆ ಮೆರೆದ ಅಪರೂಪದ ಘಟನೆ ಶಿವಮೊಗ್ಗ ನಗರದ ಕಾಶೀಪುರ ರೈಲ್ವೆ ಗೇಟ್ ಸಮೀಪ ಮಂಗಳವಾರ ಮಧ್ಯಾಹ್ನ ನಡೆಯಿತು.
ಮಧ್ಯಾಹ್ನ 1.10ರ ಸುಮಾರಿಗೆ ತಾಳಗುಪ್ಪದಿಂದ ಶಿವಮೊಗ್ಗಕ್ಕೆ ಪ್ಯಾಸೆಂಜರ್ ರೈಲು ಆಗಮಿಸುತ್ತಿತ್ತು. ಈ ವೇಳೆ ಕಾಶೀಪುರ ರೈಲ್ವೆ ಗೇಟ್ ನ ಜನಶಿಕ್ಷಣ ಸಂಸ್ಥೆಯ ಸಮೀಪ, ಎಮ್ಮೆಗಳ ಹಿಂಡೊಂದು ಹಳಿಗಳ ಬಳಿ ಓಡಾಡುತ್ತಿತ್ತು.
ಇದನ್ನು ಗಮನಿಸಿದ ಲೋಕೋ ಪೈಲಟ್ ದೂರದಲ್ಲಿಯೇ ರೈಲನ್ನು ನಿಲ್ಲಿಸಿದರು. ಎಮ್ಮೆಗಳು ಹಳಿಯಿಂದ ಬದಿಗೆ ಸರಿದ ನಂತರ, ರೈಲು ಚಾಲನೆಗೊಳಿಸಿದರು.
ಲೊಕೋ ಪೈಲಟ್ನ ಈ ಮಾನವೀಯ ಕಾರ್ಯಕ್ಕೆ ರೈಲ್ವೆ ಗೇಟ್ ಬಳಿ ನಿಂತಿದ್ದ ವಾಹನ ಚಾಲಕರು, ಸ್ಥಳೀಯ ನಿವಾಸಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಘಟನೆಯನ್ನು ಪತ್ರಕರ್ತ ಬಿ.ರೇಣುಕೇಶ್ ಅವರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.