ಆನಂದಪುರ: ಮಂಗಗಳನ್ನು ಸೆರೆ ಹಿಡಿದು ವಿಷ ಹಾಕಿದ ಆರೋಪದ ಮೇಲೆ ಐದು ಜನರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮಂಗಳವಾರ ರಾತ್ರಿ ಚಿಪ್ಪಳಿ ಕಾಡಿನಲ್ಲಿ ಬಂಧಿಸಿದ್ದಾರೆ.
ಅರಣ್ಯ ವೀಕ್ಷಕರು ಚಿಪ್ಪಳಿ ಕಾಡಿನಲ್ಲಿ ರಾತ್ರಿ ಗಸ್ತು ತಿರುಗುತ್ತಿರುವ ಸಂದರ್ಭದಲ್ಲಿ ಆರೋಪಿಗಳು 36 ಮಂಗಗಳನ್ನು ಆಟೊದಲ್ಲಿ ತಂದು ಹಾಕುತ್ತಿರುವುದು ಕಂಡು ಬಂದಿದೆ. ವಿಷಯ ತಿಳಿದ ಮೇಲಧಿಕಾರಿಗಳು ಐವರನ್ನು ಬಂಧಿಸಿದ್ದಾರೆ.
‘ಹೊಲಗಳಿಗೆ ಬಂದು ಬೆಳೆ ಹಾನಿ ಮಾಡುತ್ತಿದ್ದ ಕಾರಣ ಮಂಗಗಳಿಗೆ ವಿಷ ಹಾಕಿದ್ದೇವೆ ಎಂದು ಆರೋಪಿಗಳು ಹೇಳಿಕೆ ನೀಡಿದ್ದಾರೆ’ ಎಂದು ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದರು.
ತ್ಯಾಗರ್ತಿಯ ವಿಶ್ವನಾಥ್, ದಸ್ತಗೀರ್, ಲಂಬೋಧರ, ಅಭಿಷೇಕ್, ದಾವಣಗೆರೆಯ ಸಂಜೀವ್ ಬಂಧಿತರು. ಆರೋಪಿಗಳಿಂದ ಆಡಿ ಕಾರು ಹಾಗೂ ಟಾಟಾ ಏಸ್ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶ್ರೀಧರ್, ರಾಜೇಶ್ ನಾಯ್ಕ್, ವಲಯ ಅರಣ್ಯಧಿಕಾರಿ ಮೋಹನ್, ಉಪವಲಯ ಅರಣ್ಯಧಿಕಾರಿಗಳಾದ ಇಸ್ಮಾಯಿಲ್, ರಾಘವೇಂದ್ರ, ಮಂಜುನಾಥ್, ಅರಣ್ಯ ವಿಕ್ಷಕರಾದ, ಸತೀಶ್, ಷಣ್ಮುಖಪ್ಪಗೌಡ್ರು ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.