ಶಿವಮೊಗ್ಗ: ‘ಜಾನುವಾರುಗಳ ಆರೋಗ್ಯ ಸಂರಕ್ಷಣೆಗಾಗಿ 41 ಆಂಬುಲೆನ್ಸ್ ನೀಡಲಾಗಿದೆ. ಜಾನುವಾರುಗಳಿಗೇ ಪ್ರತ್ಯೇಕ ಆಂಬುಲೆನ್ಸ್ ಮೀಸಲಿಡುತ್ತಿರುವುದು ದೇಶದಲ್ಲಿಯೇ ಮೊದಲು’ ಎಂದು ಪಶುಸಂಗೋಪನಾ ಸಚಿವ ಪ್ರಭು ಬಿ.ಚವ್ಹಾಣ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪಶುಪಾಲನಾ ಇಲಾಖೆಯ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಬೆಂಗಳೂರು ಜಿಲ್ಲೆಗೆ 10, ಇತರೆ ಜಿಲ್ಲೆಗಳಿಗೆ ತಲಾ ಒಂದು ಆಂಬುಲೆನ್ಸ್ ನೀಡಲಾಗಿದೆ. ಜತೆಗೆ ಸರ್ಕಾರ ದಿಂದಲೇ ಜಿಲ್ಲೆಗೊಂದು ಗೋ ಶಾಲೆ ನಿರ್ಮಿಸಿ, ನೀರು, ನೆರಳು ಹಾಗೂ ಮೇವು ಒದಗಿಸಲಾಗುವುದು ಎಂದರು.
ಗೋಮಾಳಗಳ ಸಮೀಕ್ಷೆ ಆರಂಭ: ರಾಜ್ಯದ ಗೋಮಾಳಗಳ ಸಮೀಕ್ಷೆ ನಡೆಸಲಾಗುತ್ತಿದೆ. ಒತ್ತುವರಿಯಾದ ಗೋಮಾಳ ಜಾಗ ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ. ಅನ್ಯ ಇಲಾಖೆಗಳಲ್ಲಿ ಎರವಲು ಸೇವೆ ಸಲ್ಲಿಸುತ್ತಿರುವ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಮಾತೃ ಇಲಾಖೆಗೆ ಮರಳುವಂತೆ ಆದೇಶ ಹೊರಡಿಸಲಾಗಿದೆ. ಸಕಾಲದಲ್ಲಿ ಹಿಂದಿರುಗದ ಅಧಿಕಾರಿ ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪ್ರಾಣಿಗಳ ರಕ್ಷಣೆ ಹಾಗೂ ಪ್ರಾಣಿ ಹಿಂಸೆ ತಡೆ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಇಲಾಖಾ ಸಚಿವರು ಹಾಗೂ ನಿವೃತ್ತ ನ್ಯಾಯಾಧೀಶರನ್ನು ಒಳಗೊಂಡ 28 ಸದಸ್ಯರ ‘ಪ್ರಾಣಿ ಕಲ್ಯಾಣ ಮಂಡಳಿ’ ಸ್ಥಾಪಿಸಲಾಗಿದೆ ಎಂದು ಮಾಹಿತಿ ನೀಡಿದರು.