ಹೊಳೆಹೊನ್ನೂರು: ಸಮೀಪದ ಮೈದೊಳಲಿನಲ್ಲಿ ರಾಮನವಮಿ ಪ್ರಯುಕ್ತ ಸೋಮವಾರ ಆಂಜನೇಯ ಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
ಮಲ್ಲೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ನಡೆದ ಕೆಂಡಾರ್ಚನೆಯೊಂದಿಗೆ ರಥೋತ್ಸವ ಆರಂಭವಾಯಿತು. ಬಳಿಕ ಶ್ರೀಹರಿಸೇವೆ, ಉಚ್ಚಾಯ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳುನೆರವೇರಿದವು.
ಭಕ್ತರು ಆಂಜನೇಯ ಸ್ವಾಮಿಯ ರಥ ಏಳೆದು, ರಥದ ಕಳಸಕ್ಕೆ ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ಪ್ರಸಾದವಾಗಿ ಹಣ್ಣುತುಪ್ಪ, ಪಾನಕ, ಕೋಸಂಬರಿ ವಿತರಿಸಲಾಯಿತು.
ತಮಟೆ, ಡೊಳ್ಳುಕುಣಿತ ಮೇಳಗಳು ರಥೋತ್ಸವಕ್ಕೆ ಮೆರುಗು ನೀಡಿದವು. ಸ್ವಾಮಿಗೆ ಹರಕೆ ಹೊತ್ತವರು ಮಕ್ಕಳ ಜವಳ ತೆಗೆಸುವುದು, ಮುದ್ರೆ ಹಾಕಿಸುವ ಕಾರ್ಯಕ್ರಮಗಳಲ್ಲಿಭಾಗವಹಿಸಿದರು.
ಸಂಜೆ ಓಕುಳಿಯಲ್ಲಿ ಕಾರ್ಯಕ್ರಮ ನೆರವೇರಿತು. ಗ್ರಾಮದ ಗಡಿಗೆ ಚರಗ ಚೆಲ್ಲುವುದರೊಂದಿಗೆ ರಥೋತ್ಸವ ಮುಕ್ತಾಯವಾಯಿತು. ಆಂಜನೇಯ ಸೇವಾ ಸಮಿತಿ ಮತ್ತು ಗ್ರಾಮಸ್ಥರು ರಥೋತ್ಸವದಲ್ಲಿ ಭಾಗವಹಿಸಿದ್ದರು.