ಶಿವಮೊಗ್ಗ: ಹಳದಿ ರೋಗದ ಬಾಧೆ ಜತೆಗೆ ಕೆಲವು ಹೊಸ ರೋಗಗಳು ಅಡಿಕೆ ಬೆಳೆಯನ್ನು ಕಾಡುತ್ತಿವೆ. ರೋಗ ತಡೆಗಟ್ಟಲು ಸೂಕ್ತ ಔಷಧಗಳ ಸಂಶೋಧನೆಗೆ ಒತ್ತು ನೀಡಲಾಗುವುದು ಎಂದು ಅಡಿಕೆ ಕಾರ್ಯಪಡೆ (ಅರೆಕಾ ಟಾಸ್ಕ್ಫೋರ್ಸ್) ಅಧ್ಯಕ್ಷ ಆರಗ ಜ್ಞಾನೇಂದ್ರ ಹೇಳಿದರು.
ಅಡಿಕೆ ಆರೋಗ್ಯಕ್ಕೆ ಹಾನಿಕಾರಕವಲ್ಲ ಎಂದು ಸಾಬೀತುಪಡಿಸಬೇಕಿದೆ. ಕಾರ್ಯಪಡೆ ಕೋರಿಕೆ ಮೇರೆಗೆ ಎಂ.ಎಸ್.ರಾಮಯ್ಯ ವಿಶ್ವವಿದ್ಯಾಲಯದ ಅನ್ವಯಿಕ ವಿಜ್ಞಾನ ವಿಭಾಗ ಸಂಶೋಧನಾ ಕೈಗೊಂಡಿದೆ. ಸಂಶೋಧನೆ ಮುಂದುವರಿದಿದೆ. ಐದಾರು ತಿಂಗಳಲ್ಲಿ ವರದಿ ಬರಬಹುದು. ಈ ವರದಿ ಕೈಸೇರಿದ ತಕ್ಷಣ ಸುಪ್ರೀಂಕೋರ್ಟ್ಗೆ ಸಲ್ಲಿಸಲಾಗುವುದು. ಈ ಎಲ್ಲ ಕಾರ್ಯಗಳಿಗೆ ಆವಶ್ಯಕತೆ ಇದ್ದ ₹ 10 ಕೋಟಿಯನ್ನು ರಾಜ್ಯ ಸರ್ಕಾರ ನೀಡಿದೆ.ಈಗಾಗಲೇ ತೋಟಗಾರಿಕೆ ಇಲಾಖೆಯ ಮೂಲಕ ಹಣ ಬಿಡುಗಡೆ ಯಾಗಿದೆ. ಕಾರ್ಯಪಡೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶಕ್ತಿ ತುಂಬಿದ್ದಾರೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಶ್ಲಾಘಿಸಿದರು.
ಅಡಿಕೆ ಬೆಳೆಗಾರರ ಹಿತರಕ್ಷಣೆಗಾಗಿ ಅಡಿಕೆ ಕಾರ್ಯಪಡೆಗೆ ರಚಿಸಲಾಗಿದೆ. ಅಡಿಕೆ ಬೆಲೆಯ ಅಸ್ಥಿರತೆ, ನ್ಯಾಯಾಲಯದ ಕಾಯ್ದೆಗಳು, ಅತಿವೃಷ್ಟಿ, ಅನಾವೃಷ್ಟಿ ಹೀಗೆ ಹಲವು ಕಾರಣಗಳಿಂದ ಬೆಳೆಗಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಬೆಳೆಗಾರರ ಸಂಕಟಗಳಿಗೆ ಸೂಕ್ತ ಪರಿಹಾರ ಹುಡುಕಲು ಇತರೆ ಸಂಸ್ಥೆಗಳ ಸಹಯೋಗದಲ್ಲಿ ಶ್ರಮಿಸಲಾಗುವುದು ಎಂದರು.
ಸರ್ಕಾರ ನೀಡಿದ ಹಣವನ್ನು ಅಡಿಕೆ ಬೆಳೆಗಾರರ ಹಿತಕ್ಕಾಗಿ ಬಳಸಿಕೊಳ್ಳಲಾಗುವುದು. ಹಲವು ಪ್ರಕರಣಗಳು ಸುಪ್ರೀಂ ಕೋರ್ಟ್ನಲ್ಲಿವೆ. ಪ್ರಕರಣಗಳಿಂದ ಶೀಘ್ರ ಹೊರಬರಬೇಕಾಗಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಅಡಿಕೆಯಲ್ಲಿ ಕ್ಯಾನ್ಸರ್ಕಾರಕ ಗುಣಗಳಿವೆ ಎಂದು ಸುಪ್ರೀಂಕೋರ್ಟ್ಗೆ ಪ್ರಮಾಣಪತ್ರ ಸಲ್ಲಿಸಿತ್ತು. ಅಡಿಕೆ ಆರೋಗ್ಯಕ್ಕೆ ಹಾನಿಕಾರಕವಲ್ಲ ಎಂದು ಸಾಬೀತುಪಡಿಸಬೇಕಿದೆ. ಅದಕ್ಕಾಗಿ ಕಾರ್ಯಪಡೆಯಿಂದಲೇ ತಜ್ಞ ವಕೀಲರನ್ನು ನೇಮಕ ಮಾಡಲಾಗುವುದು ಎಂದು ಮಾಹಿತಿ ನೀಡಿದರು.